ಖಾಸಗಿ ವಿದ್ಯಾಸಂಸ್ಥೆ ಮಾಲೀಕನ ಮನೆಗೆ ನುಗ್ಗಿದ ಕಳ್ಳರು: 1 ಕೋಟಿ 50 ಲಕ್ಷ ಮೌಲ್ಯದ ನಗದು - ಚಿನ್ನಾಭರಣ ದೋಚಿ ಪರಾರಿ
![ETV Thumbnail thumbnail](https://etvbharatimages.akamaized.net/etvbharat/prod-images/01-07-2023/640-480-18890523-thumbnail-16x9-bgk.jpg)
ಆನೇಕಲ್(ಬೆಂಗಳೂರು) ಇಡೀ ಕುಟುಂಬ ಪುಣ್ಯ ಕ್ಷೇತ್ರಗಳಿಗೆ ತೆರಳಿದ್ದನ್ನು ಅರಿತ ಕಳ್ಳರ ತಂಡ ಖಾಸಗಿ ವಿದ್ಯಾಸಂಸ್ಥೆಯ ಮಾಲೀಕನ ಮನೆಗೆ ನುಗ್ಗಿ 1 ಕೋಟಿ 50 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಸಿಸಿ ಕ್ಯಾಮೆರಾ ಡಿವಿಆರ್ ಕಿತ್ತೊಯ್ದ ಕಳ್ಳರು:ಆನೇಕಲ್ ತಾಲೂಕಿನ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯ ಮಾಲೀಕ ಶಶಿಧರ್ ಮನೆಗೆ ಕಳ್ಳರು ಕನ್ನ ಹಾಕಿ ದೋಚಿದ್ದಾರೆ. ತುಮಕೂರು ಮಠದ ಭಕ್ತರಾಗಿದ್ದ ಶಶಿಧರ್ ಅವರು ಇಡೀ ಕುಟುಂಬ ಸಮೇತ ಪುಣ್ಯ ಕ್ಷೇತ್ರಗಳ ದರ್ಶನದ ಸೆಲ್ಫಿ ವಿಡಿಯೋ ಫೋಟೋಗಳನ್ನು ಆಗಿಂದಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದರು. ಇದರಿಂದ ಚುರುಕುಗೊಂಡ ಕಳ್ಳರ ತಂಡ ಇತ್ತ ಶಶಿಧರ್ ಮನೆಯ ಬಾಗಿಲು ಮುರಿದು ಕೋಟ್ಯಂತರ ರೂ. ನಗದು, ಚಿನ್ನಾಭರಣ ದೋಚಿದ್ದಲ್ಲದೇ, ಸಿಸಿ ಕ್ಯಾಮೆರಾ ಡಿವಿಆರ್ ಅನ್ನೂ ಸಹ ಹೊತ್ತೊಯ್ದಿದ್ದಾರೆ.
ಮನೆಯಲ್ಲಿದ್ದ 1ಕೋಟಿ 50 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಲಾಗಿದೆ. ಲಾಕರ್ ನಲ್ಲಿದ್ದ 1 ಕೆ.ಜಿ ಚಿನ್ನಾಭರಣ, 6 ಕೆ ಜಿ ಬೆಳ್ಳಿ 53 ಲಕ್ಷ ನಗದನ್ನು ಲಾಕರ್ ಸಮೇತ ಕದ್ದೊಯ್ದಿದ್ದಾರೆ. ಮರುದಿನ ಶಶಿಧರ್ ಅವರ ಸಹೋದರಿ ಮನೆಗೆ ಬಂದಿದ್ದ ವೇಳೆ ಬಾಲ್ಕನಿ ಡೋರ್ ಮುರಿದಿರುವುದನ್ನು ಕಂಡು ಸಹೋದರನಿಗೆ ಕಾಲ್ ಮಾಡಿದ್ದಾರೆ. ಈ ಕೂಡಲೇ ಬಂದ ಶಶಿಧರ್, ತಕ್ಷಣ ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳ ಸುಳಿವಿಗೆ ಸಿಸಿಟಿವಿ ಚೆಕ್ ಮಾಡೋದಕ್ಕೆ ಮುಂದಾಗಿದ್ದಾರೆ. ಡಿವಿಆರ್ ಪತ್ತೆ ಇಲ್ಲ. ಕಳ್ಳರು ಡಿವಿಆರ್ ಕದ್ದೊಯ್ದಿದ್ದನ್ನು ಅರಿತ ಪೊಲೀಸರು ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಅವಧಿ ಮುಗಿದ ಆಹಾರ ಉತ್ಪನ್ನಗಳ ಮರು ಪ್ಯಾಕಿಂಗ್.. ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ