ಯಾದಗಿರಿ: ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿದರೂ ನಮ್ಮನ್ನ ಮನೆಗೆ ಕಳುಹಿಸಿ ಕೊಡುತ್ತಿಲ್ಲ ಎಂದು ಕ್ವಾರೆಂಟೆನ್ ಕೇಂದ್ರ ಒಂದರಲ್ಲಿದ್ದ ವಲಸೆಕಾರ್ಮಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನಮ್ಮನ್ನ ಮನೆಗೆ ಕಳುಹಿಸಿ ಕೊಡದಿದ್ದರೆ ಈ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಲಾಕ್ ಡೌನ್ ಸಡಿಲಿಕೆ ನಂತರ ಇತ್ತೀಚೆಗೆ ಮಹರಾಷ್ಟ್ರದಿಂದ ಆಗಮಿಸಿದ ನೂರಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನ ಶಹಪುರ ಪಟ್ಟಣದ ಆದರ್ಶ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರೆಂಟೆನ್ ಮಾಡಲಾಗಿತ್ತು.
ವಲಸೆ ಕಾರ್ಮಿಕರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಇಲ್ಲಿದ್ದ ನೂರಾರು ಕಾರ್ಮಿಕರು ಶಾಲಾ ಕಟ್ಟಡದ ಆವರಣದಲ್ಲಿ ಬಂದು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.
ನಮ್ಮನ್ನು ಮನೆಗೆ ಕಳುಹಿಸಿ ಕೊಡಿ ಇಲ್ಲವಾದಲ್ಲಿ ಇಲ್ಲಿನ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೂರಾರು ಕಾರ್ಮಿಕರು ಮೊಬೈಲ್ ವಿಡಿಯೋ ಹರಿ ಬಿಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇವರು ಹರಿಬಿಟ್ಟಿರುವ ವಿಡಿಯೋ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ತಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ.