ಯಾದಗಿರಿ : ಟ್ರಾನ್ಸ್ಜೆಂಡರ್ ಹಕ್ಕು ರಕ್ಷಣೆ-2019 ಬಿಲ್ ಹಿಂಪಡೆಯುವಂತೆ ಒತ್ತಾಯಿಸಿ ಇಂದು ಮಂಗಳಮುಖಿಯರು ಪ್ರತಿಭಟನೆ ನಡೆಸಿದರು. ನಗರದ ಸುಭಾಷ್ ವೃತ್ತದಲ್ಲಿ ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಮಂಗಳಮುಖಿಯರಿಂದ ಪ್ರತಿಭಟನೆ ನಡೆಸಲಾಯಿತು.
ಲೋಕಸಭೆಯಲ್ಲಿ ಟ್ರಾನ್ಸ್ಜೆಂಡರ್ ಮಸೂದೆಯನ್ನು ತಿದ್ದುಪಡಿ ಸಮೇತ ಅನುಮೋದನೆ ನೀಡುವ ಮೂಲಕ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿದೆ. ಇದರಲ್ಲಿ 2016ರ ಮಸೂದೆ ಬಗ್ಗೆ ಟ್ರಾನ್ಸ್ಜೆಂಡರ್ ಸಮುದಾಯ ವಿಮರ್ಶೆಗಳನ್ನು ಮತ್ತು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೇ ಮಂಗಳಮುಖಿಯರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮೀಸಲಾತಿ ನೀಡದೆ ಅವಕಾಶ ವಂಚಿತರನ್ನಾಗಿಸಿದ್ದಾರೆ. ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಬಾರದು ಎಂದು ಪ್ರತಿಭಟನಾನಿರತ ಮಂಗಳಮುಖಿಯರು ಆಗ್ರಹಿಸಿದರು.