ಯಾದಗಿರಿ: ತಾಲೂಕಿನ ಕಣೆಕಲ್, ಸೈದಾಪುರ ಮತ್ತು ವಂಕಸಂಬ್ರ ಗ್ರಾಮದಲ್ಲಿ ನಡೆಯಬೇಕಿದ್ದ 4 ಬಾಲ್ಯವಿವಾಹಗಳನ್ನು ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ತಡೆಹಿಡಿದಿದ್ದಾರೆ.
ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಅನ್ವಯ ಯಾದಗಿರಿ ತಾಲೂಕಿನ ಕಣೇಕಲ್ ಗ್ರಾಮದಲ್ಲಿ 1, ವಂಕಸಂಬ್ರ ಗ್ರಾಮದಲ್ಲಿ 2 ಮತ್ತು ಸೈದಾಪುರದಲ್ಲಿ ಮೇ 24ರಂದು ನಡೆಯಬೇಕಿದ್ದ ಬಾಲ್ಯವಿವಾಹವನ್ನ ಅಧಿಕಾರಿಗಳು ತಡೆಹಿಡಿದಿದ್ದಾರೆ. ಅಲ್ಲದೆ, ಬಾಲ್ಯವಿವಾಹಕ್ಕೆ ಮುಂದಾಗಿರುವುದು ಕಾನೂನು ಪ್ರಕಾರ ಅಪರಾಧ. ಬಾಲ್ಯ ವಿವಾಹ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-2006ರ ಪ್ರಕಾರ ಮದುವೆಯಾಗಲು ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ಪೂರ್ಣಗೊಂಡಿರಬೇಕು ಎಂದು ಬಾಲಕಿಯರ ಪೋಷಕರಿಗೆ ತಿಳುವಳಿಕೆ ನೀಡಿದರು. ನಂತರ ಕೋವಿಡ್-19 ಹಿನ್ನೆಲೆ, ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಬಾಲ್ಯವಿವಾಹದಿಂದ ರಕ್ಷಿಸಿದ ಬಾಲಕಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಗಿದೆ.
ಬಳಿಕ ಬಾಲ್ಯವಿವಾಹದಿಂದ ರಕ್ಷಿಸಿದ ಬಾಲಕಿಯರನ್ನ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಭಾಕರ್ ಮಾಹಿತಿ ನೀಡಿದ್ದಾರೆ.