ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಸಾಹಸಮಯ ಪಂದ್ಯ ಕಟ್ಟಿ ಸಾಹಸ ಮೆರೆಯಲಾಗಿದೆ.
ಜಾಲಿಬೆಂಚಿ ಗ್ರಾಮದ ರಾಜಮಹ್ಮದ್ ಚೆನ್ನೂರ ಎಂಬ ಯುವಕ ಪಂದ್ಯ ಕಟ್ಟಿ ಎಡ ಭುಜದ ಮೇಲೆ ತುಂಬಿದ ಕೊಡವನ್ನು ಹಿಡಿದು ಬಲಗೈಯಿಂದ ಚಕ್ಕಡಿಯ ಗಾಲಿಯನ್ನ ಜಾಲಿಬೆಂಚಿ ಬಸವಣ್ಣ ದೇವಸ್ಥಾನದಿಂದ ಪೇಠ ಅಮ್ಮಾಪುರದ ಹನುಮಾನ್ ದೇವಸ್ಥಾನದವರೆಗೆ ಸತತ ಎರಡು ಕಿಲೋ ಮೀಟರ್ವರೆಗೂ ತಳ್ಳಿ ಪಂದ್ಯ ಗೆದ್ದು ಬೀಗಿದ್ದಾನೆ.
ಇದರ ಕುರಿತು ಗ್ರಾಮದ ಯುವಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ನಮ್ಮ ಗ್ರಾಮದ ಯುವಕ ಯಾರೂ ಮಾಡದ ಸಾಹಸ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಗ್ರಾಮದ ಜನರು ಯುವಕನ ಸಾಹಸಕ್ಕೆ 11,000 ರೂಪಾಯಿಗಳ ಬಹುಮಾನ ನೀಡುತ್ತಿರುವುದಾಗಿ ತಿಳಿಸಿದರು. ಜಾಲಿಬೆಂಚಿ ಗ್ರಾಮದ ಬಸವಣ್ಣ ದೇವಸ್ಥಾನದಿಂದ ಪೇಠ ಅಮ್ಮಾಪುರದ ಹನುಮಾನ್ ದೇವಸ್ಥಾನದವರೆಗೆ ಎಲ್ಲಿಯೂ ನಿಲ್ಲದೆ ಚಕ್ಕಡಿ ಗಾಲಿ ಉರುಳಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.