ಸುರಪುರ: ರಾಯಚೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಭಾನುವಾರ ರಾತ್ರಿ ಸುರಪುರದಲ್ಲಿನ ಅವರ ಸ್ವಗೃಹ ವಸಂತ ಮಹಲ್ನಲ್ಲಿ ನಿಧನರಾಗಿದ್ದಾರೆ.
61 ವಯಸ್ಸಿನ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರಿಗೆ ಒಬ್ಬ ಪುತ್ರ ರಾಜಾ ರೂಪಕುಮಾರ ನಾಯಕ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಸುರಪುರದ ರಾಜಕಾರಣದಲ್ಲಿ ತಮ್ಮದೇ ಆದ ಅಸ್ತಿತ್ವ ಹೊಂದಿದ್ದ ರಾಜಾ ರಂಗಪ್ಪ ನಾಯಕರು 24 ಮೇ 1959 ರಲ್ಲಿ ಜನಿಸಿದ್ದು, ಬಹುತೇಕ ಶಿಕ್ಷಣವನ್ನು ಹೈದರಾಬಾದ್ನಲ್ಲಿಯೇ ಮುಗಿಸಿದ್ದರು. ತಂದೆ ರಾಜಾ ಕುಮಾರ ನಾಯಕಕೂಡ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು, ಇವರ ಹಿರಿಯ ಸಹೋದರ ರಾಜಾ ವೆಂಕಟಪ್ಪ ನಾಯಕ ಕೂಡ ಶಾಸಕರಾಗಿದ್ದರು.
1987 ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿ 1987 ರಿಂದ ಎರಡು ಬಾರಿ ಹೆಮನೂರು ಮಂಡಲ್ನ ಪ್ರಧಾನರಾಗಿದ್ದರು. ನಂತರ 1995 ರಲ್ಲಿ ಅಂದಿನ ಗುಲ್ಬರ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡಿದ್ದರು. 1996 ರಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
1996ರ 11ನೇ ಲೋಕಸಭೆಗೆ ರಾಯಚೂರು ಲೋಕಸಭಾ ಕ್ಷೇತ್ರದಿಂದ ಅಂದಿನ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 2,14,920 ಮತಗಳನ್ನು ಪಡೆದು ಮೊದಲ ಬಾರಿಗೆ ಸಂಸದರಾಗಿ ಸಂಸತ್ ಪ್ರವೇಶಿಸಿದರು. ದೇವೇಗೌಡರಿಗೆ ಆಪ್ತರಾಗಿದ್ದ ಇವರು ತಂದೆ ರಾಜಾ ಕುಮಾರ ನಾಯಕ ಹಾಗೂ ಅಣ್ಣಾ ರಾಜಾ ವೆಂಕಟಪ್ಪ ನಾಯಕರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಈ ಭಾಗದ ಪ್ರಭಾವಿ ರಾಜಕಾರಣಿಯ ನಿಧನದಿಂದ ಆಘಾತಗೊಂಡಿರುವ ಅನೇಕ ರಾಜಕೀಯ ಮುಖಂಡರು ಮತ್ತವರ ಅಭಿಮಾನಿಗಳು ರಾಜಾ ರಂಗಪ್ಪ ನಾಯಕರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.