ಸುರಪುರ : ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ್ ಗ್ರಾಮದಲ್ಲಿ ಸ್ವತಃ ತಾಯಿಯೇ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಂದಿರುವ ಘೋರ ಘಟನೆ ನಡೆದಿದೆ.
ಜ್ಯೂಸ್ ಅಂತಾ ತಿಳಿದು ಮಕ್ಕಳು ವಿಷ ಸೇವಿಸಿ ಮೃತ ಪಟ್ಟಿದ್ದಾರೆ ಎಂದು ಹೇಳಿ ನಾಟಕವಾಡಿದ್ದ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಫೆಬ್ರವರಿ 27 ರಂದು 2 ವರ್ಷದ ಖೈರೊನ್ ಹಾಗೂ 4 ತಿಂಗಳ ಅಫ್ಸಾನಾ ಮೃತಪಟ್ಟಿದ್ದರು.
ಮಕ್ಕಳು ವಿಷ ಸೇವಿಸಿದ್ದನ್ನು ಅರಿತು ತಾಯಿ ಸೈನಾಜ ಬೇಗಂ ಕೂಡ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಅಂತಾ ಬಿಂಬಿಸಲಾಗಿತ್ತು. 2 ವರ್ಷದ ಖೈರೊನ್ ಆಟವಾಡುತ್ತಾ ವಿಷದ ಬಾಟಲ್ ತೆಗೆದುಕೊಂಡು ತನ್ನ ನಾಲ್ಕು ತಿಂಗಳ ತಂಗಿ ಅಫ್ಸಾನಾಗೆ ಜ್ಯೂಸ್ ಎಂದು ವಿಷ ಕುಡಿಸಿದ್ಲು ಎಂದು ತಾಯಿ ಸೈನಾಜ ಬೇಗಂ ಎಲ್ಲರನ್ನೂ ನಂಬಿಸಿದ್ದಳು.
ಓದಿ: ಬಿಬಿಎಂಪಿ ಸುತ್ತಲಿನ 1 ಕಿ.ಮೀ. ವ್ಯಾಪ್ತಿ ಪ್ರದೇಶ ಬಿಬಿಎಂಪಿಗೆ ಸೇರ್ಪಡೆ
ಘಟನೆ ನಂತರ ಯಾವುದೇ ಪ್ರಕರಣ ದಾಖಲು ಮಾಡದೆ ಪೋಷಕರು ಮಕ್ಕಳ ಅಂತ್ಯಸಂಸ್ಕಾರ ಮಾಡಿದ್ದರು. ನಂತರ ಮೃತ ಮಕ್ಕಳ ಅಜ್ಜಿ ನಬಮ್ಮ ವಡಗೇರಾ ಪೊಲೀಸ್ ಠಾಣೆಗೆ ದೂರು ನೀಡಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಒತ್ತಾಯಿಸಿದರು.
ದೂರಿನ ಹಿನ್ನೆಲೆ ವಿಧಿವಿಜ್ಞಾನ ತಜ್ಞ ವೈದ್ಯ ಡಾ. ಪ್ರವೀಣ್ ನೇತೃತ್ವದಲ್ಲಿ ಹೂತಿಟ್ಟ ಮಕ್ಕಳ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ವಿಷ ಪ್ರಾಷನವಾಗಿರೋ ಬಗ್ಗೆ ಡಿಸೆಂಬರ್ 7ಕ್ಕೆ ವರದಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸೈನಾಜ ಬೇಗಂ ಅವರನ್ನು ಬಂಧಿಸಿದ್ದಾರೆ.