ಸುರಪುರ(ಯಾದಗಿರಿ): ಕೊರನಾ ಭೀತಿ ಹಿನ್ನೆಲೆ ನಗರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕ್ವಾರಂಟೈನಲ್ಲಿದ್ದ 264 ಜನರನ್ನು ಇಂದು ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿದೆ.
ನಗರದ ನ್ಯಾಯಾಲಯದ ಎದರುಗಡೆ ಇರುವ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿದ್ದ ವಲಸೆ ಕಾರ್ಮಿಕರ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆ ಎರಡು ವಸತಿ ನಿಲಯದಿಂದ ಒಟ್ಟು 209 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಅದೇ ರೀತಿಯಾಗಿ ಬೇರೆ ಕ್ವಾರಂಟೈನಲ್ಲಿದ್ದ 55 ಜನರು ಸೇರಿ ಒಟ್ಟು 264 ಜನರನ್ನು ಅವರ ಮನೆಗೆ ಕಳುಹಿಸಲಾಗುತ್ತಿದೆ ಎಂದು ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ತಿಳಿಸಿದರು.
ಇಂದು ಬಿಡುಗಡೆಗೊಳ್ಳುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಶಹಪುರ ತಾಲೂಕಿನವರಾಗಿದ್ದು, ಎಲ್ಲರ ಕೈಗಳಿಗೆ ಮೊಹರು ಹಾಕಲಾಗಿದೆ. ಇಲ್ಲಿಂದ ಮನೆಗೆ ಹೋದ ನಂತರ ಎರಡು ವಾರ ಮನೆಯಲ್ಲಿರುವಂತೆ ಸೂಚಿಸಲಾಗಿದೆ ಎಂದು ನಿಂಗಣ್ಣ ಬಿರಾದರ್ ಹೇಳಿದರು.
ಎಲ್ಲ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಅವರ ಊರುಗಳಿಗೆ ಕಳುಹಿಸುವ ಸಂದರ್ಭದಲ್ಲಿ ತಾಲೂಕು ಆಡಳಿತ ಕ್ವಾರಂಟೈನಲ್ಲಿರುವಾಗ ನೀಡಿದ ಸೇವೆಗೆ ಎಲ್ಲ ಕಾರ್ಮಿಕರು ಧನ್ಯವಾದ ಸಲ್ಲಿಸಿ, ಬಸ್ ಹೊರಡುವಾಗ ತಹಶೀಲ್ದಾರರಿಗೆ ಜಯವಾಗಲಿ ಎಂದು ಜಯಘೋಷ ಹಾಕುತ್ತಾ ಪ್ರಯಾಣಕ್ಕೆ ಮುಂದಾದರು.