ವಿಜಯಪುರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದ್ದಾರೆ.
ಕಾಖಂಡಕಿ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಸುನಿತಾ ದೇವಾನಂದ ಚವ್ಹಾಣ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 5 ವರ್ಷಗಳ ಹಿಂದೆ ಮೋದಿ, ದೇಶದ ಜನತೆಗೆ ಸಾಕಷ್ಟು ಆಶ್ವಾಸನೆಗಳನ್ನು ಕೊಟ್ಟು ಈಡೇರಿಸುವುದಾಗಿ ತಿಳಿಸಿದ್ದರು. ಆದರೆ ಅದು ಯಾವುದೂ ಜಾರಿಗೆ ಬಂದಿಲ್ಲ ಎಂದರು. ವಿಜಯಪುರದಿಂದ ಬೆಂಗಳೂರಿಗೆ ಸರಿಯಾಗಿ ರೈಲು ಓಡಿಸಲು ಆಗದ ನಮ್ಮ ಸಂಸತ್ ಸದಸ್ಯರು 10 ವರ್ಷಗಳಿಂದ ಲೋಕಸಭೆಯಲ್ಲಿದ್ದಾರೆ. ಇವರು ವಿಜಯಪುರ ಜಿಲ್ಲೆಗೆ ಯಾವ ಸೌಕರ್ಯ ಒದಗಿಸಿದ್ದಾರೆ? ಯಾವ ಸಾಧನೆಗಾಗಿ ಇವರಿಗೆ ಮತ ಚಲಾಯಿಸಬೇಕು? ಎಂದು ಹೇಳುತ್ತಾ ಮತದಾರರು ಆತ್ಮಾವಲೋಕನ ಮಾಡುವಂತೆ ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸುನಿತಾ ದೇವಾನಂದ ಚವ್ಹಾಣ ಮಾತನಾಡಿ, ನನಗೆ ಮತದಾನ ಮಾಡಿ ಜಯಗಳಿಸಿಕೊಟ್ಟರೆ ನಿಮ್ಮ ಮನೆ ಮಗಳಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಇದೇ ವೇಳೆ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಜಿ.ಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಜಕ್ಕಪ್ಪ ಎಡವೆ ಬಸವರಾಜ ಹೊನವಾಡ, ಬಾಪುಗೌಡ ಪಾಟೀಲ್, ಅಪ್ಪಾಸಾಹೇಬ ಪಾಟೀಲ್, ರಮೇಶ ಹೆಬ್ಬಿ, ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ ರೇವಣು ರಾಠೋಡ, ಎಂ.ಎಸ್.ಕೋರಿ, ಆರ್.ಬಿ.ದಳವಾಯಿ, ಯಲ್ಲಪ್ಪ ಚೌಡಕಿ, ಮೆಹಬುಬ ಪಟೇಲ್, ಮಲ್ಲು ಪರಸಣ್ಣವರ, ಮಾರುತಿ ಸಾಳುಂಕೆ ಮತ್ತಿತರರು ಉಪಸ್ಥಿತರಿದ್ದರು.