ವಿಜಯಪುರ: ಕರವೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ.
ನಿನ್ನೆ ಸಂಜೆ ನಗರದ ಸಿದ್ದೇಶ್ವರ ಮಂದಿರಕ್ಕೆ ಕರವೇ ಕಾರ್ಯಕರ್ತರು ಗುಂಪು-ಗುಂಪಾಗಿ ಬಂದು ಜಮಾವಣೆಗೊಂಡಿದ್ದು, ಕೆಲಕಾಲ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಅಲ್ಲದೇ, ಕಳೆದ ಭಾನುವಾರ ಕೂಡ ವಿವಿಧ ಸಂಘಟನೆಗಳು ಹಾಗೂ ಶಾಸಕ ಯತ್ನಾಳರ ಅಭಿಮಾನಿಗಳು ಡಿ. 05 ರಂದು ಕರ್ನಾಟಕ ಬಂದ್ ವಿರೋಧಿಸಿ ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ನಿನ್ನೆ ಸಂಜೆ ಕರವೇ ಕಾರ್ಯಕರ್ತರು ಬಾವುಟ ಹಾಗೂ ಶಲ್ಯ ಧರಿಸಿ ಅದೇ ಸ್ಥಳಕ್ಕೆ ಬಂದಿದ್ದಾರೆ.
ಕಾರ್ಯಕರ್ತರು ಸಿದ್ದೇಶ್ವರ ಮಂದಿರ ರಸ್ತೆಗೆ ಬರುತ್ತಿದ್ದಂತೆ, ಯಾವುದೇ ಪ್ರತಿಭಟನೆ ಮಾಡುವ ಮುಂಚಿತವಾಗಿ ಪೊಲೀಸರ ಅನುಮತಿ ಪಡೆದಿರಬೇಕೆಂದು ಪೊಲೀಸರು ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ, ನಾವು ಸಿದ್ದೇಶ್ವರ ದೇವಾಲಯದ ದರ್ಶನಕ್ಕೆ ಬಂದಿದ್ದೇವೆ. ಅಲ್ಲದೇ ಯಾವುದೇ ಘೋಷಣೆ ಕೂಗಿಲ್ಲ, ಪ್ರತಿಭಟನೆ ಮಾಡಿಲ್ಲ ಎಂದು ಕರವೇ ಸಂಘಟನೆ ಮುಖಂಡರು ಪೊಲೀಸರಿಗೆ ಮನವರಿಕೆ ಮಾಡಿದ್ದಾರೆ. ಬಳಿಕ ಪೊಲೀಸರು ಹಾಗು ಕರವೇ ಕಾರ್ಯಕರ್ತರ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ.