ವಿಜಯಪುರ: ನಗರದಲ್ಲಿ ಜಾರಿಯಲ್ಲಿರುವ 156 ಕೋಟಿ ರೂ. ವೆಚ್ಚದ ಕುಡಿಯುವ ನೀರು ಸರಬರಾಜು ಅಮೃತ್ ಯೋಜನೆಯ ಕಾಮಗಾರಿಗಳನ್ನ ಬರುವ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸೂಚಿಸಿದ್ದಾರೆ.
ಅಮೃತ್ ಯೋಜನೆ ಕಾಮಗಾರಿಗಳು ಕಳೆದ 2019 ರಿಂದ ನಡೆಯುತ್ತಿದ್ದು, ಈವರೆಗೆ ಈ ಯೋಜನೆ ಪೂರ್ಣಗೊಂಡಿಲ್ಲದ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಸಚಿವರ ಗಮನಕ್ಕೆ ತಂದಿದ್ದರು. ಈ ಕುರಿತು ಪರಿಶೀಲಿಸಿದ ಸಚಿವ, ಈ ಯೋಜನೆಯನ್ನ ಮುಂಬರುವ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಸಂಬಂಧಪಟ್ಟ ಏಜೆನ್ಸಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಅಲ್ಲದೆ, ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆ, ಕಾಮಗಾರಿ ಪ್ರಗತಿ, ಸಾಧನೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಅಮೃತ್ ಯೋಜನೆಯಡಿ ನಗರದ ಆರು ವಲಯಗಳಲ್ಲಿ ಸದ್ಯಕ್ಕೆ ನೀರು ಪೂರೈಕೆಯಾಗುತ್ತಿದ್ದು, ಇನ್ನುಳಿದ ವಲಯಗಳಿಗೂ ನೀರು ಪೂರೈಸುವ ನಿಟ್ಟಿನಲ್ಲಿ ಕಾಮಗಾರಿ ಚುರುಕು ಗೊಳಿಸಬೇಕು. ಮಾನವ ಸಂಪನ್ಮೂಲ ಹೆಚ್ಚಿಸಿಕೊಂಡು ಶೀಘ್ರ ಕಾಮಗಾರಿ ಮುಗಿಸಬೇಕು ಎಂದರು.
ಇದೇ ವೇಳೆ ಕೊರೊನಾ ಸೋಂಕು ತಡೆಗಟ್ಟುವಿಕೆಗಾಗಿ ಕೋಟ್ಯಾಂತರ ರೂ. ಹಣ ಖರ್ಚು ಮಾಡಿ, ವಿವಿಧ ಕೆಮಿಕಲ್ ಸಿಂಪಡಣೆ ಮಾಡಲಾಗುತ್ತಿದೆ. ಇದರಿಂದ ಹಣ ಪೋಲು ಆಗುತ್ತಿಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಮಿಕಲ್ ಸಿಂಪಡಣೆ ಮಾಡಿದರೆ ಕೊರೊನಾ ಹೋಗುತ್ತದೆಯೋ, ಇಲ್ಲವೋ ಎನ್ನುವುದು ಬೇರೆ ಮಾತು. ಇದು ನನಗೆ ಹಾಗೂ ಸಾರ್ವಜನಿಕರ ಮನಸ್ಸಿನ ಶಾಂತಿಗಾಗಿ ಮಾಡುವುದು ಎಂದರು.
ಬಳಿಕ ಹೇಳಿಕೆಯನ್ನ ಸಮರ್ಥಿಸಿಕೊಂಡ ಅವರು, ಕೆಲವು ವಿಷಯಗಳು ಮನಶಾಂತಿಗಾಗಿ ಮಾಡುವುದು. ಜನರಲ್ಲಿ ಧೈರ್ಯ ತುಂಬುವ ಕೆಲಸ ಇದಾಗಿದೆ. ಹೀಗಾಗಿ ಕೆಮಿಕಲ್ ಸಿಂಪಡಣೆ ಮಾಡುವುದು ತಪ್ಪೇನಿಲ್ಲ ಎಂದರು.