ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ರಸ್ತೆಯ ತೋಟದ ಮನೆ ನಿವಾಸಿ ಹಾಗೂ ಖ್ಯಾತ ರಂಗಭೂಮಿ ಕಲಾವಿದ ಸಂಗಪ್ಪ ಈರಪ್ಪ ಮಾದನಶೆಟ್ಟಿ (65) ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಖ್ಯಾತ ರಂಗಭೂಮಿ ಕಲಾವಿದ ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾಗಿದ್ದ ಸಂಗಪ್ಪ ಮಾದನಶೆಟ್ಟಿ, ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಶ್ರೀ ಕೃಷ್ಣ ಪಾರಿಜಾತದ ಮುಖಾಂತರ ನಾಡಿನಲ್ಲಿ ಪ್ರಸಿದ್ಧರಾಗಿದ್ದರು. ಸ್ವಂತ ನಾಟಕ ತಂಡವನ್ನು ಕಟ್ಟಿಕೊಂಡು ಸಾವಿರಾರು ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಯಲು ನಾಟಕ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿದ್ದರು.
ಮಾದನಶೆಟ್ಟಿ, ನಾಡಿನ ವಿವಿಧ ಸಂಘ-ಸಂಸ್ಥೆಗಳಿಂದ ನೀಡಲಾಗುವ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಮುದ್ದೇಬಿಹಾಳ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಇಂದು ನೆರವೇರಿಸಲಾಯಿತು.