ವಿಜಯಪುರ: ಕಳೆದ ಹಲವು ತಿಂಗಳಿನಿಂದ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಕೊಲೆ, ಕೊಲೆ ಯತ್ನ, ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ನಗರದ ಜಗದಾಳೆ ಹಾಗೂ ಸೇನಾನಗರದಲ್ಲಿ ನಡೆದ ಎರಡು ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಗಾಂಧೀ ನಗರದ ಆರೋಪಿ ರೋಹಿತ ಕಾಯಗೊಂಡನನ್ನು ಬಂಧಿಸಿ ಆತನಿಂದ 10 ತೊಲ ಬಂಗಾರ, 27 ತೊಲ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 4.96 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಗವಿಸಿದ್ಧನಮಡ್ಡಿ ನಿವಾಸಿ ಅಸ್ಲಂ ಸಣದಿ ಎಂಬ ಆರೋಪಿಯನ್ನು ಬಂಧಿಸಿ 4 ಮನೆಗಳ್ಳತನ ಪ್ರಕರಣ ಭೇದಿಸಿದ್ದಾರೆ. ಆತನಿಂದ 10 ತೊಲ ಬಂಗಾರ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 4.80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಇಬ್ಬರು ಆರೋಪಿಗಳಿಂದ 9.76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ.. ಕೋವಿಡ್ ವ್ಯಾಕ್ಸಿನ್ ಪಡೆದ ನಾರಾಯಣಮೂರ್ತಿ ದಂಪತಿ
ಇದರ ಜೊತೆಗೆೆ ಗೋಡೌನ್ ಕಳ್ಳತನ ಪ್ರಕರಣದಲ್ಲಿ 8 ಆರೋಪಿಗಳನ್ನು ಗ್ರಾಮೀಣ ಪೊಲೀಸರು ಬಂಧಿಸಿ ಅವರಿಂದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ಮೊಬೈಲ್, ಕೃತ್ಯಕ್ಕೆ ಬಳಸಿದ ವಾಹನ ವಶ ಪಡಿಸಿಕೊಳ್ಳಲಾಗಿದೆ.
ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಸ್ವಸ್ಥ ವ್ಯಕ್ತಿಯ ಕೊಲೆ ಪ್ರಕರಣ, ಚಡಚಣ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಸಹ ಭೇದಿಸಿದ್ದಾರೆ.