ಮುದ್ದೇಬಿಹಾಳ/ವಿಜಯಪುರ: ಹಾವು ಕಚ್ಚಿ ಮೃತಪಟ್ಟಿದ್ದ ತನ್ನ ತಂದೆಯ ಅಗಲಿಕೆಯ ನೋವಿನಲ್ಲೂ ವಿದ್ಯಾರ್ಥಿಯೊಬ್ಬ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಘಟನೆ ತಾಳಿಕೋಟೆಯಲ್ಲಿ ನಡೆದಿದೆ.
ಪರಶುರಾಮ ಸಿದ್ದಪ್ಪ ಹರಿಜನ (ಸಾಗರ) ಎಂಬಾತನೇ ಅಪ್ಪನ ಅಗಲಿಕೆಯ ನೋವಿನಲ್ಲೂ ಎರಡು ವಿಷಯಗಳಿಗೆ ಪರೀಕ್ಷೆ ಬರೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪರಶುರಾಮನ ತಂದೆ ಸಿದ್ದಪ್ಪ ಜುಲೈ 1 ರಂದು ಹೊಲಕ್ಕೆ ಒಡ್ಡು ಕಟ್ಟಲು ಹೋದ ವೇಳೆ ಹಾವು ಕಚ್ಚಿ ಮೃತಪಟ್ಟಿದ್ದನು. ಆದರೆ ಪರೀಕ್ಷೆ ಬರೆಯಲು ಇದ್ದ ಅವಕಾಶವನ್ನು ಹಾಳು ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಗ್ರಾಮದ ಮುಖಂಡ ಸುರೇಶಬಾಬುಗೌಡ ಪೀರಾಪೂರ ವಿದ್ಯಾರ್ಥಿಯನ್ನು ತಾಳಿಕೋಟೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆ ಬರೆಯಲು ಸಹಕಾರ ನೀಡಿದ್ದಾರೆ.
ವಿದ್ಯಾರ್ಥಿ ಪರೀಕ್ಷೆ ಮುಗಿಸಿ ಬರುವರೆಗೂ ಆತನ ತಂದೆಯ ಅಂತ್ಯ ಸಂಸ್ಕಾರ ನಡೆಸದೇ ಹಾಗೆ ಶವವನ್ನು ಮನೆಯಲ್ಲಿಟ್ಟಿದ್ದಾರೆ. ಪರೀಕ್ಷೆ ಮುಗಿಸಿಕೊಂಡು ಬಂದ ವಿದ್ಯಾರ್ಥಿ ಪರಶುರಾಮನ ಕೈಯಿಂದ ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟಿದ್ದಾನೆ. ಇಂದು ಕೂಡ ಹಿಂದಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ.