ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳು ಇರುವ ಬೆನ್ನಲ್ಲೆ, ಎರಡು ಜಿಲ್ಲಾ ಉಸ್ತುವಾರಿ ಹೊಂದಿರುವ ಸಚಿವರ ಅಧಿಕಾರ ಮೊಟಕುಗೊಳಿಸುವ ಸಾಧ್ಯತೆ ಕುರಿತು ಊಹಾಪೋಹ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ಸಚಿವ ಸಿ. ಸಿ. ಪಾಟೀಲ್ ಸದ್ಯ ಗದಗ್ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದು, ಜ. 26 ರೊಳಗೆ ವಿಜಯಪುರ ಜಿಲ್ಲೆ ಉಸ್ತುವಾರಿ ಬಿಟ್ಟುಕೊಡುವ ಸಾಧ್ಯತೆಗಳಿವೆ. ಗಣರಾಜ್ಯೋತ್ಸವ ದಿನದಂದು ಸಿ. ಸಿ. ಪಾಟೀಲ ಬದಲು ನೂತನ ಸಚಿವರು ಧ್ವಜಾರೋಹಣ ನೇರವೇರಿಸಲಿದ್ದಾರೆ ಎನ್ನುವ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಇದಕ್ಕೆ ಪೂರಕವಾಗಿ ವಿಜಯಪುರದಲ್ಲಿ ಮಾತನಾಡಿದ ಸಚಿವ ಸಿ. ಸಿ. ಪಾಟೀಲ್, ಗಣರಾಜ್ಯೋತ್ಸವಕ್ಕೆ ಇಲ್ಲಿಯೇ ಧ್ವಜಾರೋಹಣ ಮಾಡ್ತೀರಾ ಎಂಬ ಪ್ರಶ್ನೆಗೆ ನೋಡೋಣ ಎಂದು ಹಾರಿಕೆಯ ಉತ್ತರ ನೀಡಿದ್ದು ಇದಕ್ಕೆ ಸಾಕ್ಷಿಯಾಗಿತ್ತು. ಕನ್ನಡ ರಾಜ್ಯೋತ್ಸವಕ್ಕೆ ಗೈರಾಗಿದ್ದ ಸಚಿವರು ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.