ವಿಜಯಪುರ: ಸಚಿವ ಸಂಪುಟ ವಿಸ್ತರಣೆ ವೇಳೆ ಸುಸ್ಥಿರ ಸರ್ಕಾರಕ್ಕಾಗಿ ಕೆಲ ಸಚಿವರು ತ್ಯಾಗ ಮಾಡಬೇಕು. ಎಲ್ಲ ಸ್ಥಾನಮಾನಗಳನ್ನು ಅನುಭವಿಸಿದವರೂ ತ್ಯಾಗ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ಸಚಿವನಾಗಲು ಲಾಬಿ ಮಾಡಿಲ್ಲ. ಈ ಹಿಂದೆ ಲಾಬಿ ಮಾಡದೆ ಕೇಂದ್ರ ಸಚಿವನಾಗಿದ್ದೆ. ಅಟಲ್ ಜೀ, ಆಡ್ವಾಣಿ, ಅನಂತಕುಮಾರ್ ಅವರು ಕೇಂದ್ರ ಮಂತ್ರಿ ಮಾಡಿದ್ದರು. ಸದ್ಯ ಶಾಸಕನಾಗಿ ವಿಜಯಪುರ ನಗರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ ಎಂದರು.
ಸಚಿವರ ಮೌಲ್ಯಮಾಪನ ನಡೆಸಬೇಕೆಂದು ಸಿಎಂಗೆ ಮನವಿ ಮಾಡಿದ್ದೇನೆ. ಸಚಿವರು ವಿಧಾನಸೌಧ ಹಾಗೂ ವಿಕಾಸಸೌಧದತ್ತ ಸುಳಿಯುತ್ತಿಲ್ಲ. ಸಚಿವರಾದ ಅವರನ್ನು ಶಾಸಕರಾದ ನಾವು ಹುಡುಕಾಡಬೇಕಾಗಿದೆ. ಕಳಪೆ ಸಾಧನೆ ಮಾಡಿದ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಸಚಿವ ಸ್ಥಾನ ಕಳೆದುಕೊಂಡರೆ ಅವರೇನು ಬಂಡಾಯ ಏಳಲ್ಲ. ಬಂಡಾಯ ಎದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗಲ್ಲ ಎಂದು ತಮ್ಮದೆ ಪಕ್ಷದ ಸಚಿವರ ವಿರುದ್ಧ ಚಾಟಿ ಬೀಸಿದರು.