ವಿಜಯಪುರ: ಕೇವಲ 12ಎಕರೆ ಭೂಮಿಯಲ್ಲಿ ವಿವಿಧ ಹಣ್ಣುಗಳನ್ನು ಯಾವುದೇ ಸರ್ಕಾರಿ ಗೊಬ್ಬರ ಹಾಕದೇ ತೋಟದಲ್ಲಿರುವ ಹೈನುಗಾರಿಕೆಯ ಗೊಬ್ಬರ, ತಿಪ್ಪೆ ಗುಂಡಿ ಔಷಧ ಮೂಲಕ ಸಾವಯವ ಕೃಷಿಯಲ್ಲಿ ಯಶಸ್ವಿ ಕಂಡ ನಿವೃತ್ತ ಶಿಕ್ಷಕನೊಬ್ಬ ಇತರ ರೈತರಿಗೆ ಮಾದರಿಯಾಗಿದ್ದಾರೆ. ಹಲವು ರೈತರು ಇವರ ತೋಟಕ್ಕೆ ಭೇಟಿ ನೀಡಿ ಕೃಷಿಯಲ್ಲಿಯೂ ಲಾಭ ತರಬಹುದು ಎನ್ನುವ ಇವರ ಪರಿಶ್ರಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ನಿವೃತ್ತ ಶಿಕ್ಷಕರೊಬ್ಬರು ತಮ್ಮ ತೋಟದಲ್ಲಿ ಸೀತಾಫಲ ಹಣ್ಣು ಬೆಳೆದು ಯಶಸ್ವಿಯಾಗಿರುವ ಕುರಿತು ಅವರ ಯಶೋಗಾಥೆ ಬಗ್ಗೆ 'ಈಟಿವಿ ಭಾರತ' ವರದಿ ಮಾಡುವ ಮೂಲಕ ಅವರ ಕೃಷಿ ಸಾಧನೆ ಬಗ್ಗೆ ಬೆಳಕು ಚೆಲ್ಲಿತ್ತು. ಈ ಮೂಲಕ ಕೃಷಿ ಇಲಾಖೆ ಹಾಗೂ ಕೃಷಿ ಮಹಾ ವಿದ್ಯಾಲಯದ ಗಮನ ಸೆಳೆದಿತ್ತು.
ಇದರ ಬೆನ್ನಲ್ಲಿಯೇ ಇಲಾಖೆ ಹಾಗೂ ಮಹಾ ವಿದ್ಯಾಲಯದ ಅಧಿಕಾರಿಗಳು ಹಾಗೂ ಕೃಷಿ ತಜ್ಞರು ಕಾಶಿರಾಯಗೌಡ ಬಿರಾದಾರ ಅವರ ತೋಟಕ್ಕೆ ಭೇಟಿ ನೀಡಿ ಇವರು ಬೆಳೆದ ಸೀತಾಫಲ, ಪೇರು, ಜಂಬು ನೆರಳೆ, ಹುಣಸೆ, ಟೆಂಗು ಬೆಳೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿವೃತ್ತ ಶಿಕ್ಷಕ ಕಾಶಿರಾಯಗೌಡ ಬಿರಾದಾರ ಅವರು ತಮ್ಮ 12 ಎಕರೆ ಫಲವತ್ತಾದ ಭೂಮಿಯನ್ನು ತೋಟಗಾರಿಕೆ ಬೆಳೆ ಬೆಳೆಗೆ ಪರಿವರ್ತಿಸಿಕೊಂಡು ನಾನಾ ತೋಟಗಾರಿಕೆ ಹಣ್ಣು ಬೆಳೆದು ಯಶಸ್ವಿಯಾಗಿರುವುದಕ್ಕೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದರು. ಇವರಿಗೆ ತೋಟದಲ್ಲಿ ಈರುಳ್ಳಿ ಶೇಖರಣಾ ಘಟಕ ನಿರ್ಮಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ 87.500ರೂ. ಸಹಾಯಧನ ಮಂಜೂರು ಮಾಡಿದ್ದಾರೆ.
ಅಲ್ಲದೇ, ಹುಣಸೆ ಪ್ರದೇಶ ವಿಸ್ತರಣೆಗೆ ಹಾಗೂ ಹನಿ ನೀರಾವರಿಗೂ ಸಹ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಬ್ಸಿಡಿ ನೀಡಲು ರೈತನಿಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವ ರೈತರು ನಿವೃತ್ತ ಶಿಕ್ಷಕ ಕಾಶಿರಾಯನಗೌಡ ಬಿರಾದಾರ ಅವರ ತೋಟಕ್ಕೆ ಭೇಟಿ ನೀಡಿ ಯಾವ ರೀತಿ ಕೃಷಿಯಲ್ಲಿ ಯಶಸ್ವಿಯಾಗಬೇಕು ಎನ್ನುವ ಮಾಹಿತಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇವರು ತಮ್ಮ ತೋಟದಲ್ಲಿ ಬೆಳೆದ ಸೀತಾಫಲ, ಜಂಬು ನಿರಳೆ ಮಧುಮೇಹಕ್ಕೆ ರಾಮಬಾಣವಾಗಿದೆ. ಈ ಹಣ್ಣುಗಳು ಸದೃಢ ಆರೋಗ್ಯ ಕಾಪಾಡಲು ಅತಿ ಉತ್ತಮವಾಗಿದೆ. ಸರ್ಕಾರ ಇಂಥ ಸಾವಯವ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡಬೇಕು ಎಂದು ಪ್ರಗತಿ ಪರ ರೈತ ಶ್ರೀಶೈಲಪ್ಪ ಸಜ್ಜನ ಸರ್ಕಾರಕ್ಕೆ ಇದೇ ವೇಳೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಡಿಮೆ ಬಂಡವಾಳದಲ್ಲಿ ಸೀತಾಫಲ ಬೆಳೆದ ನಿವೃತ್ತ ಶಿಕ್ಷಕನ ಯಶೋಗಾಥೆ