ವಿಜಯಪುರ: ಜಿಲ್ಲೆಯ ಚಡಚಣದ ಜವಳಿ ವ್ಯಾಪಾರಿ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ವಿವಿಧ ಸಂಘಟನೆಗಳು ನಿನ್ನೆ ಪ್ರತಿಭಟನೆ ನಡೆಸಿದವು. ಒಂದು ವೇಳೆ 24 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸದಿದ್ರೇ, ಮೇ 15ಕ್ಕೆ ಚಡಚಣ ಬಂದ್ ಮಾಡೋದಾಗಿ ವಿವಿಧ ಸಂಘಟನೆಗಳ ಮುಖಂೠರು ಎಚ್ಚರಿಸಿದರು.
ದಕ್ಷಿಣ ಭಾರತದ ಸುಪ್ರಸಿದ್ಧ ಬಾಹುಬಲಿ ಮುತ್ತಿನ ಬಟ್ಟೆ ಅಂಗಡಿ ಮಾಲೀಕ ಅಜೀತ್ ಮುತ್ತಿನ ಅವರ ಮೇಲೆ ಗುರುವಾರ ತಡ ರಾತ್ರಿ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಹಾಗೂ ಹಲ್ಲೆಗೈದ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಚಡಚಣ ಪಟ್ಟಣದ ಬಸವೇಶ್ವರ ವೃತ್ತದ ಬಳಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನಾಕಾರರು ಶುಕ್ರವಾರ ರಸ್ತೆ ತಡೆ ನಡೆಸಿದ್ದರು.
ಪಟ್ಟಣದಲ್ಲಿರುವ ಬಾಹುಬಲಿ ಮುತ್ತಿನ ಬಟ್ಟೆ ಅಂಗಡಿ ಮಾಲೀಕ ಅಜೀತ್ ಮುತ್ತಿನ ಅವರು ವ್ಯಾಪಾರ ಮುಗಿಸಿಕೊಂಡು ಹಣದೊಂದಿಗೆ ರಾತ್ರಿ ಮನೆಗೆ ತೆರಳುವ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಬ್ಬು ಕಟಾವು ಮಾಡುವ ಹರಿತ ಸಾಧನದಿಂದ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ದುರ್ಷ್ಕಮಿಗಳನ್ನು 24 ಗಂಟೆಯೊಳಗಾಗಿ ಪೊಲೀಸರು ಬಂಧಿಸಬೇಕು ಎಂದು ಕನ್ನಡಪರ ಸಂಘಟನೆ ಹಾಗೂ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಒಂದು ವೇಳೆ ಬಂಧಿಸದಿದ್ರೇ ಮೇ 15ಕ್ಕೆ ಚಡಚಣ ಪಟ್ಟಣ ಬಂದ್ಗೆ ಕರೆ ನೀಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದರು. ಘಟನೆಯಿಂದ ಈಗಲಾದರೂ ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಪಟ್ಟಣದ ವಿವಿಧೆಡೆ ಸಿಸಿ ಕ್ಯಾಮೆರಾ ಅಳವಡಿಸುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸುವುದರ ಮೂಲಕ ಪಟ್ಟಣದಲ್ಲಿ ನಡೆಯುತ್ತಿರುವ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದರು. ಪ್ರತಿಭಟನೆಯಿಂದಾಗಿ ರಾಜ್ಯ ಹೆದ್ದಾರಿ 41 ಲಿಂಗಸೂರ-ಪಂಡರಾಪೂರ ರಸ್ತೆಯಲ್ಲಿ ಕೆಲ ಕಾಲ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚಡಚಣ ಸಿಪಿಐ ಎಚ್.ಆರ್ ಪಾಟೀಲ್ ಮಾತನಾಡಿ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದರು.