ವಿಜಯಪುರ : ರಕ್ಷಕ್ ಕಾರ್ಯಾಚರಣೆಯಲ್ಲಿ ಹುತ್ಮಾತನಾದ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಅವರ ಕುಟುಂಬ ವರ್ಗದಲ್ಲಿ ದುಃಖ ಮಡುಗಟ್ಟಿದೆ.
ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಧ ಕಾಶಿರಾಯರನ್ನು ಕಳೆದುಕೊಂಡ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಯೋಧ ಕಾಶಿರಾಯರ ತಂದೆ ಮಾತನಾಡಿ, ಇನ್ನೂ 15 ದಿನದಲ್ಲಿ ಮಗ ಮನೆಗೆ ಬರುವವನಿದ್ದನು. ಕಳೆದ 15 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ನಿವೃತ್ತಿ ಅವಕಾಶವಿದ್ದರೂ ಸಹ, ಬೇಡ ನಾನು ಇನ್ನೂ ದೇಶ ಸೇವೆ ಸಲ್ಲಿಸುವೆ ಎಂದು ಹೇಳಿದ್ದನು ಎಂದು ಕಣ್ಣೀರು ಸುರಿಸಿದರು.
ಇನ್ನು, ಹುತ್ಮಾತ್ಮ ಯೋಧ ಕಾಶಿರಾಯ 8 ವರ್ಷಗಳ ಹಿಂದೆ ಸಂಗೀತಾ ಎಂಬುವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿವೆ. ತನ್ನ ಮಗನಿಗೆ ಭಗತ್ ಎಂದು ಹೆಸರು ಇಟ್ಟಿದ್ದರು. ಅವನನ್ನು ಸಹ ಸೇನೆಗೆ ಸೇರಿಸುವ ಮಹಾದಾಸೆ ಹೊಂದಿದ್ದರಂತೆ.