ವಿಜಯಪುರ: ಸದಾ ಗುಂಡಿನ ದಾಳಿ, ದ್ವೇಷದ ಕೊಲೆಗಳಿಂದಲೇ ನಲುಗಿ ಹೋಗಿರುವ ಭೀಮಾತೀರದಲ್ಲಿ ಮತ್ತೊಮ್ಮೆ ಶಾಂತಿ ಮಂತ್ರವನ್ನು ಪೊಲೀಸರು ಜಪಿಸುತ್ತಿದ್ದಾರೆ.
ಕಳೆದ ಬಾರಿ ಉತ್ತರ ವಲಯ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಭೀಮಾತೀರದಲ್ಲಿ ಶಾಂತಿ ನೆಲೆಸಲು ಸಾಕಷ್ಟು ಪ್ರಯತ್ನಿಸಿದ್ದರು. ಅದು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿತ್ತು. ಇದೇ ಕಾರಣಕ್ಕೆ ಉಮರಾಣಿಯಲ್ಲಿ ಗ್ರಾಮಸ್ಥರು ಅಲೋಕ್ ಕುಮಾರ್ ಅವರಿಗೆ ಮೈಸೂರ್ ಪೇಟಾ ತೊಡಿಸಿ ಸನ್ಮಾನಿಸಿದ್ದರು. ಕೆಲವು ತಿಂಗಳು ಶಾಂತವಾಗಿದ್ದ ಭೀಮಾತೀರ ಮತ್ತೊಮ್ಮೆ ಸದ್ದು ಮಾಡಿದ್ದು ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿಯಿಂದ. ಅಲ್ಲಿಂದ ಮತ್ತೆ ಭೀಮಾತೀರದ ರಕ್ತಸಿಕ್ತ ಇತಿಹಾಸ ಆರಂಭವಾಗಿತ್ತು. ಅದನ್ನು ತಡೆಯಲು ಮತ್ತೊಬ್ಬ ಪೊಲೀಸ್ ಅಧಿಕಾರಿ ಶಾಂತಿ ನೆಲೆಸಲು ಪ್ರಯತ್ನ ನಡೆಸಿದ್ದಾರೆ.
ಮೊದಲು ಭೀಮಾತೀರದ ರೌಡಿಗಳ ಪರೇಡ್ ನಡೆಸಿರುವ ಪೊಲೀಸ್ ಅಧಿಕಾರಿ ಇಂಡಿ ಡಿವೈಎಸ್ ಪಿ ಶ್ರೀಧರ ದೊಡ್ಡಿ ಈಗ ಶಾಂತಿಸಭೆ ನಡೆಸಿದ್ದಾರೆ. ಭೀಮಾತೀರದಲ್ಲಿ ರಕ್ತಚರಿತ್ರೆಗೆ ನಾಂದಿ ಹಾಡಿದ ಉಮರಾಣಿಯಲ್ಲಿ ಡಿವೈಎಸ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಸಂಪರ್ಕ ಸಭೆ ನಡೆಸಿದ್ದಾರೆ. ಅಪರಾಧ ಕೃತ್ಯಗಳನ್ನು ತಡೆಯಲು ಡಿವೈಎಸ್ಪಿ ಶ್ರೀಧರ ದೊಡ್ಡಿ ಹೊಸ ಪ್ಲ್ಯಾನ್ ಮಾಡಿದ್ದಾರೆ. ಭೀಮಾತೀರದಲ್ಲಿ ಶ್ರೀಧರ ದೊಡ್ಡಿ ಅವರ ಈ ಕಾರ್ಯ ಜನಮನ್ನಣೆ ಗಳಿಸಿದೆ. ಭೀಮಾತೀರದ ಜನರ ಸಮಸ್ಯೆಗಳಿಗೆ ಈ ಜನಸಂಪರ್ಕ ಸಭೆ ಸಹಾಯವಾಗುತ್ತಿದೆ. ಈ ಮೂಲಕ ಅಪರಾಧ ಕೃತ್ಯ ತಡೆಯಲು ಇದು ಬಹುಪಯೋಗಿಯಾಗಿದೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಮಾನಸಿಕ ಅಸ್ವಸ್ಥನನ್ನು ಮನೆಗೆ ಕರೆತಂದ ಕುಟುಂಬಸ್ಥರು: ಭಿಕ್ಷುಕನ ಕೊಲೆ ಮಾಡಿ ಸಿಕ್ಕಿಬಿದ್ದ ಆರೋಪಿ