ಮುದ್ದೇಬಿಹಾಳ: ಪಟ್ಟಣದ ಹಳೇ ಕೋರ್ಟ್ ಮುಂದಿರುವ ಇಲ್ಲೂರ ಜ್ಯುವೆಲರಿ ಕಳ್ಳತನಕ್ಕೆ ಯತ್ನಿಸಿದ್ದ ಆರು ಕಳ್ಳರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೆರವಾದ ಸಿಸಿಟಿವಿ:
ಜ್ಯುವೆಲರಿ ಅಂಗಡಿಯಲ್ಲಿದ್ದ ಸಿಸಿಟಿವಿಗಳು ಕಳ್ಳತನ ಪ್ರಯತ್ನ ನಡೆಸುವಾಗಲೇ ಕಳ್ಳರ ಗುರುತನ್ನು ಪತ್ತೆ ಹಚ್ಚಲು ನೆರವಾಗಿವೆ. ಪೊಲೀಸರು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದು ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಂಧಿತರಲ್ಲಿ ಬಾಗೇವಾಡಿ ಪಟ್ಟಣದ ಮಹ್ಮದ ಹನೀಫ್, ಮಹ್ಮದ್ ಯೂಸೂಫ್, ಬಾಗವಾನ, ಮುದ್ದೇಬಿಹಾಳದ ಚೇತನ ಮಲ್ಲಿಕಾರ್ಜುನ ಜತ್ತಿ, ಉಡುಪಿಯ ಪ್ರವೀಣ ಪೂಜಾರಿ, ಮುದ್ದೇಬಿಹಾಳದ ಸಕ್ಲೇನ್ ಮುಸ್ತಾಕ್ ರಸೂಲಹ್ಮದ ಅತ್ತಾರ ಇವರೆಲ್ಲರೂ ಬಾಗೇವಾಡಿಯಲ್ಲಿ ವಾಸವಿದ್ದರು. ಮುದ್ದೇಬಿಹಾಳ ಪಟ್ಟಣಕ್ಕೆ ಅ. 29ರ ರಾತ್ರಿ ಬಂದು ಅ. 30ರಂದು ಜ್ಯುವೆಲರಿ ಅಂಗಡಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸಿಪಿಐ ಆನಂದ ವಾಘಮೋಡೆ, ಪಿಎಸ್ಐ ಮಲ್ಲಪ್ಪ ಮಡ್ಡಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನುಳಿದಂತೆ ರಸೂಲ್ ಅಹ್ಮದ್ ಅತ್ತಾರ ಹಾಗೂ ಅಲ್ಲಾಭಕ್ಷ ಹುಬ್ಬಳ್ಳಿ ಪರಾರಿಯಾಗಿದ್ದಾರೆ. ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಿ ವಿಜಯಪುರ ದರ್ಗಾ ಜೈಲಿಗೆ ಪೊಲೀಸರು ಕಳಿಸಿದ್ದಾರೆ.