ವಿಜಯಪುರ/ಬೆಂಗಳೂರು: ಮಾಜಿ ಸಚಿವ, ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ(85) ಅವರು ಅನಾರೋಗ್ಯದಿಂದ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿಯವರು 1994ರಲ್ಲಿ ದೇವೇಗೌಡರ ಸಂಪುಟದಲ್ಲಿ ಮತ್ತು 2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. 2 ಬಾರಿ ಶಾಸಕರಾಗಿದ್ದ ಮನಗೂಳಿ ಇದೀಗ ಸಿಂದಗಿ ಕ್ಷೇತ್ರದ ಶಾಸಕರಾಗಿದ್ದರು.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮನಗೂಳಿ ಜ. 9ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಮೃತರು ನಾಲ್ವರು ಗಂಡು ಮಕ್ಕಳು ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇನ್ನು ಮನಗೂಳಿ ಅವರ ಪಾರ್ಥಿವ ಶರೀರ ಮಧ್ಯಾಹ್ನ 1ಗಂಟೆ ವೇಳೆಗೆ ಸಿಂದಗಿಗೆ ತಲುಪುವ ಸಾಧ್ಯತೆಗಳಿವೆ. ಆದರೆ ಅಂತ್ಯಕ್ರಿಯೆ ನಾಳೆ ಅಥವಾ ಇಂದು ಸಂಜೆ ನಡೆಸುತ್ತಾರಾ ಎಂದು ತಿಳಿದುಬಂದಿಲ್ಲ.