ಮುದ್ದೇಬಿಹಾಳ : ಗೋವಾ ರಾಜ್ಯಕ್ಕೆ ವಲಸೆ ಹೋಗಿರುವ ಮುದ್ದೇಬಿಹಾಳ ಮತಕ್ಷೇತ್ರದ ಕೂಲಿಕಾರ್ಮಿಕರನ್ನು ಕರೆತರಲು ಕ್ಷೇತ್ರದ ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ ಪ್ರಯಾಣ ಬೆಳೆಸಿದ್ದಾರೆ.
ಅಂದಾಜು ನಾಲ್ಕು ಸಾವಿರದಷ್ಟು ಸಂಖ್ಯೆಯಲ್ಲಿರುವ ಕಾರ್ಮಿಕರನ್ನು ಕರೆತರಲು ಬೇಕಾದ ವ್ಯವಸ್ಥೆಯನ್ನು ಪರಿಶೀಲಿಸಲು ಹಾಗೂ ಗೋವಾ-ಕರ್ನಾಟಕ ಗಡಿಯಲ್ಲಿ ನಿಂತು ಕಾರ್ಮಿಕರು ಬರಲು ಆಗಬೇಕಾದ ವ್ಯವಸ್ಥೆಯನ್ನು ಮಾಡಲು ಶುಕ್ರವಾರ ಅವರು ಗೋವಾಕ್ಕೆ ತೆರಳಿದ್ದಾರೆ.
ಈ ಕುರಿತು ಅವರೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರು, ಮಂಗಳೂರು ಮತ್ತಿತರ ಅಂತರ್ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಮಿಕರನ್ನು ಕರೆತರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದಂತೆ ಅಂತರ್ರಾಜ್ಯದ ಕಾರ್ಮಿಕರಿಗೂ ಪ್ರಯಾಣವನ್ನು ಉಚಿತವಾಗಿ ಒದಗಿಸುವಂತೆ ಮನವಿ ಮಾಡಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ವಿನಂತಿಸಿರುವುದಾಗಿ ಹೇಳಿಕೊಂಡಿದ್ದಾರೆ.