ಮುದ್ದೇಬಿಹಾಳ: ಬೇರೆ ರಾಜ್ಯಗಳಲ್ಲಿ ದುಡಿಯಲು ಹೋಗಿ ಲಾಕ್ಡೌನ್ನಿಂದ ಸುಮಾರು ಹತ್ತು ಸಾವಿರ ಕಾರ್ಮಿಕರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಇವರನ್ನು ಕರೆತರುವುದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆ ಮಾತನಾಡಿದ್ದೇನೆ ಎಂದು ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.
ಸರ್ಕಾರ ನಿಯಮ ಸಡಿಲಿಸಿದ ತಕ್ಷಣ ಇವರೆಲ್ಲರನ್ನೂ ಕರೆತರಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಡಿಸಿಎಂಗೆ ಮನವಿ ಮಾಡಿರುವುದಾಗಿ ಹೇಳಿದರು. ಸರ್ಕಾರ ಅಂತರ್ ರಾಜ್ಯದಲ್ಲಿರುವ ಕಾರ್ಮಿಕರನ್ನು, ವಲಸೆ ಹೋಗಿರುವವರನ್ನು ತಮ್ಮೂರಿಗೆ ಹೋಗಲು ಅನುಮತಿ ನೀಡಿದರೆ ಕರೆತರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡುವುದಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.
ರಾಜ್ಯ ಸರ್ಕಾರ ಅಂತರ್ ಜಿಲ್ಲೆಯಲ್ಲಿರುವ ಕಾರ್ಮಿಕರನ್ನು ಕರೆತರಲು ಆಯಾ ಜಿಲ್ಲಾಡಳಿತಗಳಿಗೆ ಜವಾಬ್ದಾರಿ ನೀಡಿದೆ. ನಮ್ಮ ತಾಲೂಕಿನ ಜನ ಬೇರೆ ಬೇರೆ ಜಿಲ್ಲೆಗಳಲ್ಲಿ ದುಡಿಯಲು ಹೋಗಿದ್ದಾರೆ. ಅವರು ಬರಲು ಅವಕಾಶ ಇರುವ ಕಾರಣ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.
ಗೋವಾ, ಮಹಾರಾಷ್ಟ್ರಗಳಿಗೆ ವಲಸೆ ಹೋಗಿರುವ ನಮ್ಮ ತಾಲೂಕಿನ ಕಾರ್ಮಿಕರು ಸ್ವಂತ ಊರಿಗೆ ತೆರಳಲು ಅನುಮತಿ ಸಿಕ್ಕ ಕೂಡಲೇ ಅವರನ್ನು ಮೊದಲು ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಕರೆ ತರಲಾಗುತ್ತದೆ. ಬಳಿಕ ಅವರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ನೋಂದಣಿ ಮಾಡಿಕೊಂಡು, ದಿನಸಿ ಕಿಟ್ ನೀಡಿ ಊರಿಗೆ ಕಳಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.