ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಯಡಿಯೂರಪ್ಪ ವಿರುದ್ಧ ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ರಾಜಕೀಯ ಹೇಳಿಕೆಗೆ ತಾನು ಯಾವುದೇ ಉತ್ತರ ನೀಡಲು ಬಯಸುವುದಿಲ್ಲ. ಆದರೆ, ಸಿಎಂ ಉತ್ತಮ ಕೆಲಸ ಮಾಡುತ್ತಿರುವಾಗ ಅವರ ಬದಲಾವಣೆ ವಿಚಾರ ಅನಾವಶ್ಯಕ ಎಂದರು.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್ವೈ ಕಳೆದ ಪ್ರವಾಹ ಸಂದರ್ಭದಲ್ಲಿ ಮತ್ತು ಈಗಿನ ಕೋವಿಡ್ನಂತಹ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿಯ ಹೇಳಿಕೆ ಪಕ್ಷದಲ್ಲಿ ಮುಜುಗರ ತಂದಿರುವುದು ನಿಜ. ಆದರೆ, ಪಕ್ಷದ ಹಿರಿಯರಿದ್ದಾರೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಶಾಸಕರ ನಿಧಿ ವಾಪಸ್ ಹೋಗಿರುವುದು ನಿಜ. ವಿಜಯಪುರ ನಗರದ ರಸ್ತೆ ರಿಪೇರಿಗೆ ಅನುದಾನದ ಅವಶ್ಯಕತೆ ಇದೆ. ಅದನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.