ಮುದ್ದೇಬಿಹಾಳ : ಜೆಸಿಬಿ ಚಾಲಕನ ಅಜಾಗರೂಕತೆಯಿಂದ ಏಕಾಏಕಿ ಟಿಸಿ ಸಮೇತ ಮೂರು ವಿದ್ಯುತ್ ಕಂಬಗಳು ಮುರಿಬಿದ್ದ ಘಟನೆ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ನಡೆದಿದ್ದು, ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದೆ.
ಘಟನೆ ಕುರಿತು ಮಾಹಿತಿ ನೀಡಿದ ನಗರದ ಮಾರುತಿ ನಗರದ ನಿವಾಸಿ ಎಸ್.ಆರ್. ಪಾಟೀಲ, ಹೆಸ್ಕಾಂನವರಿಗೆ ಮುನ್ಸೂಚನೆ ನೀಡದೆ ರಸ್ತೆ ಬದಿ ವಿದ್ಯುತ್ ಕಂಬಗಳಿದ್ದರೂ ದುಸ್ಸಾಹಸಕ್ಕೆ ಕೈ ಹಾಕಿ ಕೆಲಸ ಮಾಡಲು ಮುಂದಾಗಿದ್ದರಿಂದ ಘಟನೆ ನಡೆದಿದೆ. ಒಂದು ವೇಳೆ ಯಾರದ್ದಾದರೂ ಜೀವಕ್ಕೆ ಹಾನಿಯಾಗಿದ್ದರೆ ಏನು ಮಾಡುತ್ತಿದ್ದರು? ಮಾರುತಿ ನಗರದಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು ಕಳಪೆ ಗುಣಮಟ್ಟದ್ದಾಗಿದ್ದು, ಅವುಗಳಲ್ಲಿ ಕಬ್ಬಿಣದ ಕಂಬಿಗಳೇ ಇಲ್ಲ. ಹೆಸ್ಕಾಂ ಅಧಿಕಾರಿಗಳು ಕಂಬಗಳ ಗುಣಮಟ್ಟ ನೋಡದೆ ಹಾಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಢವಳಗಿಯವರೆಗೆ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಸ್ತೆ ಆಗೆಯುತ್ತಿದ್ದಾಗ ಆಕಸ್ಮಿಕವಾಗಿ ಜೆಸಿಬಿ ವಿದ್ಯುತ್ ಪರಿವರ್ತಕ (ಟಿಸಿ) ದ ಕಂಬಕ್ಕೆ ತಾಗಿದೆ. ಪರಿಣಾಮ ತಕ್ಷಣ ಟಿಸಿ ಸ್ಫೋಟಗೊಂಡಿದೆ. ಇದರಿಂದ ಹೆದರಿದ ಜೆಸಿಬಿ ಚಾಲಕ ತಕ್ಷಣ ಜೆಸಿಬಿ ಬಿಟ್ಟು ಜೀವ ಉಳಿಸಿಕೊಳ್ಳಲು ಹೊರಗಡೆ ಜಿಗಿದಿದ್ದಾನೆ. ಅಷ್ಟರಲ್ಲಾಗಲೆ ಟಿಸಿ ಇದ್ದ ಕಂಬ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸಿದ್ದ ಇನ್ನೆರಡು ಕಂಬಗಳು ಮುರಿದು ಜನವಸತಿ ಪ್ರದೇಶದಲ್ಲಿ ಬಿದ್ದಿವೆ. ಪಕ್ಕದಲ್ಲೇ ದ್ವಿಚಕ್ರ ವಾಹನದ ಶೋ ರೂಂ ಇದ್ದು, ಅಲ್ಲಿಗೆ ಪ್ರತಿನಿತ್ಯ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಸರ್ವಿಸ್ಗೆ ಬರುತ್ತಿದ್ದರು. ಆದರೆ, ಇಂದು ಶಿವರಾತ್ರಿ ನಿಮಿತ್ತ ಜನರ ಓಡಾಟ ಇರಲಿಲ್ಲ. ಹೀಗಾಗಿ ಯಾವುದೇ ಜೀವಹಾನಿ ಆಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಓದಿ : ಆಟೋ-ಕಾರು ಡಿಕ್ಕಿ: ಸ್ಥಳದಲ್ಲೇ ಏಳು ಮಂದಿಯ ದುರ್ಮರಣ
ವಿಷಯ ತಿಳಿಯುತ್ತಲೇ ತಕ್ಷಣ ಹೆಸ್ಕಾಂ ಸೆಕ್ಷನ್ ಅಧಿಕಾರಿ ಎಸ್.ಎಸ್. ಪಾಟೀಲ ಹಾಗೂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸ್ಥಳಕ್ಕಾಗಮಿಸಿದರು. ಬಳಿಕ ಹರಿದು ಬಿದ್ದಿದ್ದ ವಿದ್ಯುತ್ ತಂತಿಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಈ ಘಟನೆಯಿಂದ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು. ಹೆಸ್ಕಾಂ ಸೆಕ್ಷನ್ ಅಧಿಕಾರಿ ಎಸ್.ಎಸ್. ಪಾಟೀಲ ಮಾತನಾಡಿ, ಗುತ್ತಿಗೆದಾರರಾಗಲಿ, ಸಂಬಂಧಿಸಿದ ಇಲಾಖೆಯವರಾಗಲೀ ನಮಗೆ ಮೊದಲೇ ಮಾಹಿತಿ ಕೊಟ್ಟಿದ್ದರೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುತ್ತಿದ್ದೆವು. ಏಕಾಏಕಿ ಲೈನ್ ಟ್ರಿಪ್ ಆಗಿದ್ದರಿಂದ ಸಮಸ್ಯೆ ಆಗಿದೆ. ಘಟನೆ ಬಗ್ಗೆ ಮಾರುತಿ ನಗರದ ನಿವಾಸಿಗಳಿಂದ ದೂರವಾಣಿ ಮೂಲಕ ಮಾಹಿತಿ ತಿಳಿಯಿತು. ಒಟ್ಟು ಮೂರು ಕಂಬಗಳು ಮುರಿದಿವೆ ಎಂದು ಹೇಳಿದರು.