ಮುದ್ದೇಬಿಹಾಳ : ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ.
ಪಟ್ಟಣದ ನಿವಾಸಿ ಬಸವರಾಜ ಹಾದಿಮನಿ (ಧನ್ನೂರ) ಎಂಬುವರ ಮನೆ ಕುಸಿದಿದೆ. ನಿರಂತರವಾಗಿ ಮಳೆ ಬರುತ್ತಿದ್ದ ಕಾರಣ ಮನೆಯವರು ಸುರಕ್ಷಿತ ಸ್ಥಳದಲ್ಲಿ ಮಲಗಿದ್ದರು. ಅಡುಗೆ ಮನೆಯ ಛಾವಣಿ ಮಣ್ಣಿನ ಮೇಲುಮುದ್ದಿ ಹೊಂದಿದ್ದ ಕಾರಣ, ಕುಸಿದು ಬಿದ್ದಿದೆ.
ಘಟನೆಯಿಂದ ಅಡುಗೆ ಮನೆಯಲ್ಲಿದ್ದ ಧವಸ ಧಾನ್ಯ, ಪಾತ್ರೆಗಳು ಹಾಳಾಗಿವೆ. ಈ ಕುರಿತು ಮಾತನಾಡಿದ ಬಸವರಾಜ ಹಾದಿಮನಿ ಅವರ ಪತ್ನಿ ಅನ್ನಪೂರ್ಣ ಹಾದಿಮನಿ (ಧನ್ನೂರ), ಮನೆ ಬಿದ್ದಿರುವುದರಿಂದ ತೊಂದರೆಯಾಗಿದೆ. ಮಳೆ ಬರುತ್ತಿದ್ದರಿಂದ ವಸ್ತುಗಳನ್ನು ತೆಗೆದಿರಿಸಿಕೊಳ್ಳಲು ಮುಂದಾದರೂ ಆಗಲಿಲ್ಲ. ನಮಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.