ಮೈಸೂರು : ಮೈಸೂರನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿ ನಗರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ 2,843 ಕೋಟಿ ರೂ. ನೆರವು ಕೋರಿ ವಿಶ್ವಬ್ಯಾಂಕ್ಗೆ ಪ್ರಸ್ತಾವನೆ ಸಲ್ಲಿಸಿದೆ.
ರಾಜಧಾನಿ ಬೆಂಗಳೂರು ನಂತರ ಅತಿ ವೇಗವಾಗಿ ಬೆಳೆಯುತ್ತಿರುವ, ಮೈಸೂರು ನಗರವು ಸಾಂಸ್ಕೃತಿಕ ನಗರಿಯಾಗಿ ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿದೆ. ಇದೀಗ ಮೈಸೂರನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿ ನಗರವನ್ನಾಗಿ ಮಾಡುವ ಉದ್ದೇಶದಿಂದ ಪಾಲಿಕೆ ಪ್ರಸ್ತಾವನೆ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಕಳೆದ ಡಿಸೆಂಬರ್ 24ರಂದು (ಶುಕ್ರವಾರ) ಬೆಂಗಳೂರಿನ ವಿಕಾಸಸೌಧದಲ್ಲಿ ಪಾಲಿಕೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದರು.
ಸುಸ್ಥಿರ ನಗರ ಅಭಿವೃದ್ಧಿ ಮತ್ತು ಹವಾಮಾನ ಸ್ಥಿತಿ ಸ್ಥಾಪಕತ್ವದ ಜಾಗತಿಕ ಉದ್ದೇಶಗಳಿಗನುಗುಣವಾಗಿ ಪ್ರಪಂಚದಾದ್ಯಂತ ಅಭಿವೃದ್ಧಿ ಯೋಜನೆಗಳಿಗೆ ವಿಶ್ವ ಬ್ಯಾಂಕ್ ಹಣಕಾಸು ಒದಗಿಸುತ್ತದೆ. ಇದರಿಂದ ನೆರವು ಪಡೆಯಲು ಮೈಸೂರು ಮಹಾನಗರ ಪಾಲಿಕೆ ಹಿಂದಿನ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ 2,843 ಕೋಟಿ ರೂ.ಗಳ ಯೋಜನಾ ವರದಿ ಸಿದ್ಧಪಡಿಸಿದ್ದರು. ಅಲ್ಲದೆ, ಅನುದಾನದ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದರಲ್ಲದೆ, ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಅಂದು ನಡೆದ ಸಭೆಗೆ ಮಾಹಿತಿ ನೀಡಿದ್ದರು.
ಮೈಸೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕನಸಾಗಿದೆ. ಒಮ್ಮೆ ಮೈಸೂರಿಗೆ ಅವರು ಕಾರ್ಯಕ್ರಮ ನಿಮಿತ್ತ ಬಂದಿದ್ದರು. ಮೈಸೂರಿಗೆ ಸಾಂಸ್ಕೃತಿಕ, ಪಾರಂಪರಿಕ, ಪ್ರವಾಸೋದ್ಯಮ ಮಹತ್ವ ಇರುವುದನ್ನು ಮನಗಂಡು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೈಸೂರು ಅಭಿವೃದ್ಧಿಗೆ ವಿಶ್ವಬ್ಯಾಂಕ್ ನೆರವು ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಹೀಗಾಗಿ, ಅಂದಿನ ಸಭೆಯಲ್ಲಿ ಮೈಸೂರಿಗೆ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪಾಲಿಕೆ ಅಧಿಕಾರಿಗಳು ಮೈಸೂರಿನಲ್ಲಿ ಏನೆಲ್ಲಾ ಸುಸ್ಥಿರ ಅಭಿವೃದ್ಧಿ ಕೆಲಸ ಮಾಡಬಹುದು ಎಂಬ ಪ್ರಾತ್ಯಕ್ಷಿಕೆಯನ್ನೂ ಸಭೆಯಲ್ಲಿ ನೀಡಿದ್ದರು.
ಯಾವುದಕ್ಕೆ ಎಷ್ಟು ಹಣ? | |
ಸಮಗ್ರ ಘನತ್ಯಾಜ್ಯ ನಿರ್ವಹಣೆ | 110 ಕೋಟಿ ರೂ. |
ನಗರ ಕಣ್ಗಾವಲು ವ್ಯವಸ್ಥೆ ಜಾರಿ | 410 ಕೋಟಿ ರೂ. |
ಡಿಜಿಟಲ್ ರಸ್ತೆ ಮಾಪನ, ಜಿಪಿಆರ್ ಪರಿಹಾರಗಳು | 9.02 ಕೋಟಿ ರೂ. |
ಮಳೆ ನೀರು ಚರಂಡಿ ವ್ಯವಸ್ಥೆಯ ಪುನಾರಚನೆ | 500 ಕೋಟಿ ರೂ. |
ಯುಟಿಲಿಟಿ ಕಾರಿಡಾರ್ಗಳ ಸ್ಥಾಪನೆ | 400 ಕೋಟಿ ರೂ. |
ಹಸಿರು ವಲಯಕ್ಕಾಗಿ ಕೊಳಚೆ ನೀರಿನ ಸಂಸ್ಕರಣಾ ಸೌಲಭ್ಯಗಳ ನವೀಕರಣ | 1,138 ಕೋಟಿ ರೂ. |
ನೀರು ಸರಬರಾಜು ಸಾಮರ್ಥ್ಯ ಹೆಚ್ಚಿಸುವುದು | 276 ಕೋಟಿ ರೂ |
ಪ್ರಸ್ತಾವನೆಯಲ್ಲಿ ಸಲ್ಲಿಕೆಯಾದ ಪ್ರಮುಖ ಅಂಶಗಳು :
ಘನತ್ಯಾಜ್ಯ ಸೂಕ್ತ ನಿರ್ವಹಣೆ : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಘನ ತ್ಯಾಜ್ಯ ಸಮಸ್ಯೆ ಹೆಚ್ಚಾಗಿದ್ದು, ಈ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆ, ಸಂಗ್ರಹಣೆ, ವಿಂಗಡಣೆ, ಮರು ಬಳಕೆ, ಸಂಸ್ಕರಣೆ ಮತ್ತು ವಿಲೇವಾರಿ ಮೂಲಕ ನಗರದ ಸ್ವಚ್ಛತೆ, ಪರಿಸರ ಸಂರಕ್ಷಣೆ ಮಾಡಲು ಪ್ರಸ್ತಾವನೆಯಲ್ಲಿ ನಮೂದಿಸಲಾಗಿದೆ.
ಕಣ್ಗಾವಲು ವ್ಯವಸ್ಥೆ : ಮೈಸೂರು ನಗರದಾದ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಹೈ-ಡೆಫಿನಿಷನ್ ಕ್ಯಾಮರಾಗಳು, ಸಂವೇದಕಗಳು ಮತ್ತು ಸಾಫ್ಟ್ವೇರ್ಗಳೊಂದಿಗೆ ಸುರಕ್ಷತೆ ಮತ್ತು ನಿರ್ವಹಣೆಯನ್ನು ಅಭಿವೃದ್ಧಿಪಡಿಸುವ ಹಾಗೂ ಸ್ಮಾರ್ಟ್ ಸಿಟಿ ಉಪಕ್ರಮಗಳನ್ನು ಬೆಂಬಲಿಸುವುದು ಕಣ್ಗಾವಲು ಉದ್ದೇಶವಾಗಿದೆ.
ಮಳೆ ನೀರಿಗೆ ಸಮಗ್ರ ಚರಂಡಿ ವ್ಯವಸ್ಥೆ : ಮಳೆ ನೀರಿನ ಚರಂಡಿ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದು ಹೋಗಲು ಸಂಪರ್ಕ ಜಾಲ ಸದೃಢಪಡಿಸುವುದು, ಪ್ರವಾಹಗಳಂತಹ ಸ್ಥಿತಿ ಉಂಟಾದಾಗ ಅಪಾಯವಾಗದಂತೆ ಕ್ರಮ ವಹಿಸುವುದು. ಎಸ್ಟಿಪಿ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳನ್ನು ಸಂಪನ್ಮೂಲ ಉತ್ಪಾದನೆಗಾಗಿ ಬಳಕೆ ಮಾಡಿ ಸ್ವಚ್ಛತೆ, ಹವಾಮಾನ ನಿಯಂತ್ರಣ ಹಾಗೂ ಸಾರ್ವಜನಿಕ ಆರೋಗ್ಯ ಸುಧಾರಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಯೋಜನೆ ರೂಪಿಸಲಾಗಿದೆ.
ನೀರು ಸರಬರಾಜು ವ್ಯವಸ್ಥೆಯಲ್ಲಿ ಕಟುನಿಟ್ಟಿನ ಕ್ರಮ : ನೀರಿನ ಸೋರಿಕೆ ತಡೆದು ಅನಧಿಕೃತ ಸಂಪರ್ಕ ಸ್ಥಗಿತಗೊಳಿಸುವುದು, ಜಾಲ ಬಲಪಡಿಸುವ, ಅಧಿಕೃತ ಮೀಟರ್ ಅಳವಡಿಸಿ, ನಿರಂತರ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸಲೂ ಈ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.
ಆಯುಕ್ತರು ಹೇಳಿದ್ದೇನು ? 'ಸಾಂಸ್ಕೃತಿಕ ನಗರಿ ಮೈಸೂರು ಅರಮನೆಗಳ ನಗರಿಯಾಗಿದೆ. ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಗಳಿಗೆ ನಾವು ಪರಿಸರ ಸ್ನೇಹಿ ನಗರವಾಗಿ ಮಾಡುವ ದೃಷ್ಟಿಯಿಂದ ವಿಶ್ವಬ್ಯಾಂಕ್ನಿಂದ ನೆರವು ಪಡೆಯಲು ಮೈಸೂರು ಮಹಾನಗರ ಪಾಲಿಕೆ ಹಿಂದಿನ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ 2,843 ಕೋಟಿ ರೂ.ಗಳ ಯೋಜನಾ ವರದಿ ಸಿದ್ಧಪಡಿಸಿ, ಅನುದಾನದ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ನೆರವು ಪಡೆಯಲು ಎಲ್ಲಾ ರೀತಿಯ ಕ್ರಮಗಳನ್ನ ವಹಿಸಲಾಗುವುದು' ಎಂದು ನೂತನವಾಗಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಬಂದಿರುವ ಷೇಕ್ ನೂರ್ ಆಶಿಫ್ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ : ವೆಲ್ಲಿಂಗ್ಟನ್ ಭವನ ನವೀಕರಣ : ಇಲ್ಲಿವೆ ರಾಜಪರಂಪರೆಯ ಅಪರೂಪದ ಕಲಾಕೃತಿಗಳು - WELLINGTON BUILDING RENOVATION