ಮುದ್ದೇಬಿಹಾಳ : ಕೊರೊನಾ ವೈರಸ್ ಹಾವಳಿ ಹಾಗೂ ಮಾರುಕಟ್ಟೆಯಲ್ಲಿ ಬಾಯಿಗೆ ಬಂದಷ್ಟು ಬೆಲೆ ನಿಗದಿಯಿಂದ ಈರುಳ್ಳಿ ಬೆಳಗಾರರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿಯೇ ಅತೀ ಹೆಚ್ಚು ಈರುಳ್ಳಿ ಬೆಳೆದಿರುವ ರೂಢಗಿಯ ರೈತರ ಪಾಡು ಶೋಚನೀಯವಾಗಿದೆ.
ರೂಢಗಿಯಲ್ಲಿ ಹೆಚ್ಚಿನ ಭೂ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಾರರು ಇದ್ದು, ಇಲ್ಲಿ ಪಪ್ಪಾಯಿ, ಈರುಳ್ಳಿ, ಕಬ್ಬು, ದ್ರಾಕ್ಷಿ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ಶೇ.80ರಷ್ಟು ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ. ಅಂದಾಜು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಸಲ 100ಕ್ಕೂ ಹೆಚ್ಚು ಜನರು ಈರುಳ್ಳಿ ಬೆಳೆದಿದ್ದಾರೆ.
ಜೂನ್ 29ರಂದು ಢವಳಗಿ ಹೋಬಳಿ ವ್ಯಾಪ್ತಿಯಲ್ಲಿ 131 ಮಿ.ಮೀ ಮಳೆ ಸುರಿದಿದೆ. ಹಲವಾರು ಜಮೀನುಗಳು ಜಲಾವೃತಗೊಂಡಿವೆ. ಈರುಳ್ಳಿ ಸಂಗ್ರಹಗಾರಗಳಲ್ಲೂ ನೀರು ಹೋಗಿ ಬೆಳೆ ಕೊಳೆಯುತ್ತಿದೆ. ಆದರೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ, ಕೂತಲ್ಲಿಯೇ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಈ ಕುರಿತು ಮಾಹಿತಿಗಾಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಯತ್ನಿಸಿದ್ರೂ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.
ಹೊಲದಲ್ಲಿಯೇ ಕೊಳೆಯುತ್ತಿವೆ ಈರುಳ್ಳಿ : ಈರುಳ್ಳಿ ಬೆಳೆದ ಖರ್ಚಿಗಿಂತ ಅದರ ಮಾರಾಟ, ಸಾಗಾಟದ ಖರ್ಚು ಹೆಚ್ಚಾಗುತ್ತಿರುವ ಕಾರಣ ಹೊಲದಲ್ಲಿಯೇ ಈರುಳ್ಳಿಯನ್ನು ರೈತರು ಬಳತ(ಈರುಳ್ಳಿ ಸಂಗ್ರಹಿಸುವ ಸ್ಥಳದ ಹೆಸರು)ದಲ್ಲಿ ಸಂಗ್ರಹಿಸಿದ್ದಾರೆ. ಇದೀಗ ಇಟ್ಟಲ್ಲಿಯೇ ಈರುಳ್ಳಿ ಮೊಳಕೆಯೊಡೆದು ಕೊಳೆಯಲು ಆರಂಭಿಸಿದೆ.
ಮಾರುಕಟ್ಟೆಗೆ ಈರುಳ್ಳಿ ತರಲು ಹಿಂದೇಟು : ಢವಳಗಿ, ಹಳ್ಳೂರ, ಗುಂಡಕರ್ಜಗಿ, ಗುಡದಿನ್ನಿ, ಆಲಕೊಪ್ಪರ, ರೂಢಗಿ ಗ್ರಾಮಗಳಲ್ಲಿ ಈರುಳ್ಳಿ ಹೆಚ್ಚು ಬೆಳೆಯಲಾಗಿದೆ. ಮಾರುಕಟ್ಟೆಗೆ ತರಲು ರೈತರು ಹಿಂದೇಟು ಹಾಕುವಂತಾಗಿದೆ. ಮಾರುಕಟ್ಟೆಯಲ್ಲಿ ಕೈಗೆ ಬಂದಷ್ಟು ಬೆಲೆಗೆ ಬೆಳೆಯನ್ನು ಮಾರುವ ದುಸ್ಥಿತಿ ನಿರ್ಮಾಣವಾಗಿದೆ.
ತೋಟಗಾರಿಕಾ ಬೆಳೆಗಾರರು ನಷ್ಟ ಅನುಭವಿಸಿದ್ದಕ್ಕೆ ಆನ್ಲೈನ್ ಮೂಲಕ ಅರ್ಜಿ ಹಾಕಿರುವ ರೈತರಿಗೆ ಬೆಳೆ ಪರಿಹಾರ ಹಣ ಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆಯಾದ್ರೂ ಸರ್ಕಾರದಿಂದ ಇನ್ನೂ ಯಾವಾಗ ಪರಿಹಾರ ಧನ ಜಮೆ ಮಾಡಲಾಗುತ್ತದೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ ರೈತರು.