ವಿಜಯಪುರ : ಮಾಜಿ ಸಚಿವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿದ್ದೇನೆ. ಕಾಂಗ್ರೆಸ್ ಏಜೆಂಟ್ನಾಗಿಲ್ಲ, ನಾನು ಕಾಂಗ್ರೆಸ್ ಏಜೆಂಟ್ನಾಗಿದ್ದರೆ, ನನ್ನ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ 204 ಕೋಟಿ ರೂ.ಗಳ ಮಾನಹಾನಿ ಮಾಡುತ್ತಿರಲಿಲ್ಲ. ಸಿಎಂ ಬಿಎಸ್ವೈ, ಡಿಕೆಶಿ ಹಾಗೂ ವಿಜಯೇಂದ್ರ ಎಲ್ಲರೂ ಒಂದೇ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದರು.
ವಾರದಲ್ಲಿ ಹಗರಣ ಬಯಲಿಗೆ? : ಫೆಡರಲ್ ಬ್ಯಾಂಕ್ನಲ್ಲಿ ಅಕ್ರಮವಾಗಿ ಸಾವಿರಾರು ಕೋಟಿ ರೂ. ಇಡಲಾಗಿದೆ ಎನ್ನಲಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿಎಂ ಪುತ್ರ ವಿಜಯೇಂದ್ರ ಪ್ರಕರಣ ವಾರದಲ್ಲಿ ಬಯಲಿಗೆ ಬರಲಿದೆ. ಆಗ ಗೊತ್ತಾಗುತ್ತದೆ, ಯಾರೇನೆಂದು ಅಂತ ಹೊಸ ಬಾಂಬ್ ಸಿಡಿಸಿದರು.
ಪುನೀತ್ ರಾಜಕುಮಾರ್ ಒತ್ತಡಕ್ಕೆ ಆಕ್ರೋಶ : 'ಯುವರತ್ನ' ಚಲನಚಿತ್ರಕ್ಕೆ ಶೇ.100ರಷ್ಟು ಸೀಟು ಭರ್ತಿಗೆ ಸಿಎಂ ಬಿಎಸ್ವೈ ಅವಕಾಶ ನೀಡಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸ್ಟಾರ್ ನಟರು ಹಾಗೂ ಜನ ಸಾಮಾನ್ಯರು ಬೇರೆನಾ?, ಸಿನಿಮಾ ಹೀರೊಗಳು ದೊಡ್ಡವರಾ? ಅಥವಾ ದೇಶದ ನಾಗರಿಕರು ದೊಡ್ಡವರಾ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಮಾಸ್ಕ್ ಹಾಕುವುದಿಲ್ಲ, ಸಾಮಾಜಿಕ ಅಂತರ ಸಹ ಇರುವುದಿಲ್ಲ. ಹೀಗಿರುವಾಗ ನೀವೇ ಸರ್ಕಾರಿ ನಿಯಮ ಪಾಲನೆ ಮಾಡಿ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.