ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ರೂಢಗಿ ತಾಂಡಾದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಬಂಜಾರ ಸಮುದಾಯದವರ ವಿರುದ್ಧ ಸಂವಿಧಾನ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ತಾಂಡದ ಜನ ಆರೋಪಿಸಿದ್ದಾರೆ.
ಲಂಬಾಣಿ ಜನಾಂಗವನ್ನು ಎಸ್ಸಿ ಪಟ್ಟಿಯಿಂದ ಕೈಬಿಡದಂತೆ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪತ್ರ ಚಳವಳಿ ಪ್ರತಿಭಟನೆಯಲ್ಲಿ ಬಂಜಾರ ಸಮಾಜದ ಮುಖಂಡ ಎಸ್.ಪಿ.ಸೇವಾಲಾಲ್ ಮಾತನಾಡಿದರು. ಡಿಸಿಎಂ ಗೋವಿಂದ ಕಾರಜೋಳ ಅವರು ಬಂಜಾರರನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಡಿಸಿಎಂ ವಿರುದ್ಧ ಧಿಕ್ಕಾರ ಕೂಗಿದರು.
ಮುದ್ದೇಬಿಹಾಳದಿಂದ ಸಿಎಂಗೆ 6500 ಪತ್ರ ಪೋಸ್ಟ್: ಲಂಬಾಣಿ ಜನಾಂಗವನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡದಂತೆ ಆಗ್ರಹಿಸಿ ಬಂಜಾರ ಜನಾಂಗದವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ 6500 ಪತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಲಕ್ಷಣ ಲಮಾಣಿ, ಕೆಲವರ ಹುನ್ನಾರದಿಂದ ಎಲ್ಲಾ ರಂಗಗಳಲ್ಲೂ ಹಿಂದುಳಿದಿರುವ ಬಂಜಾರ, ಕೊರಮ, ಭೋವಿ ಜನಾಂಗದವರನ್ನು ಮೀಸಲಾತಿ ಪಟ್ಟಿಯಿಂದ ತೆಗೆಯುವ ಕುತಂತ್ರ ನಡೆದಿದೆ. ಇದನ್ನು ಪರಿಗಣಿಸದೆ ಎಸ್ಸಿ ಪಟ್ಟಿಯಲ್ಲಿ ಮುಂದುವರೆಸಬೇಕು ಎಂದು ಹೇಳಿದರು.