ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ ಚಡಚಣ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿ ವರ್ಷಗಳೇ ಉರುಳಿದ್ದರೂ ಹಳೇ ದ್ವೇಷ ಮಾತ್ರ ಇನ್ನೂ ಮುಂದುವರೆದಿದೆ ಎಂಬುದಕ್ಕೆ ನಗರದಲ್ಲಿ ನಡೆದ ಹಲ್ಲೆಯೊಂದು ಸಾಕ್ಷಿಯಾಗಿದೆ.
ಹೌದು.., ಚಡಚಣನ ಬೆಂಬಲಿಗನೊಬ್ಬ ಧರ್ಮರಾಜ ಚಡಚಣ ಇಷ್ಟಪಡುತ್ತಿದ್ದ ಹಾಡೊಂದನ್ನು ಆಟೋದಲ್ಲಿ ಹಾಕಿದ್ದಕ್ಕೆ ಕೆಲವರು ಆತನ ಮೇಲೆ ನಿನ್ನೆ ತಡರಾತ್ರಿ ಹಲ್ಲೆ ನಡೆಸಿದ್ದಾರೆ. ಬಾಬೂ ಬಿರಾದಾರ ಹಲ್ಲೆಗೊಳಗಾದ ಆಟೋ ಚಾಲಕ ಎಂದು ಹೇಳಲಾಗುತ್ತದೆ.
ತಡರಾತ್ರಿ ಆಟೋದಲ್ಲಿ ಧರ್ಮರಾಜಗೆ ಸಂಬಂಧಿಸಿದ್ದ ಹಾಡನ್ನು ಹಾಕಿಕೊಂಡು ಬಾಬೂ ಬಿರಾದಾರ ಹೊರಟಿದ್ದ ವೇಳೆ ಅಡ್ಡಗಟ್ಟಿದ ಕೆಲವರು ಕ್ಯಾತೆ ತಗೆದಿದ್ದಾರೆ. ಹಾಡು ಹಾಕಿದ್ರೆ ಧರ್ಮರಾಜ ಹಾಗೂ ಗಂಗಾಧರ ಚಡಚಣನಿಗೆ ಬಂದ ಗತಿ ನಿನಗೂ ಬರುತ್ತೆ ಅಂತಾ ಧಮ್ಕಿ ಹಾಕಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಬಾಬು ಬಿರಾದಾರ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನು ಈ ಸಂಬಂಧ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.