ವಿಜಯಪುರ: ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯಲಿರುವ 2020 ನೇ ಸಾಲಿನ ಕೃಷಿ ಮೇಳಕ್ಕೆ ಶನಿವಾರ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಮೇಳದ ಮೊದಲನೇ ದಿನವಾದ ನಿನ್ನೆ ಫಲಪುಷ್ಪ ಹಾಗೂ ಮತ್ಸ್ಯ ಪ್ರದರ್ಶನ ಆಯೋಜಿಸಲಾಗಿತ್ತು.
ಮೇಳದಲ್ಲಿ ಕಲಂಗಡಿ ಹಣ್ಣಿನಲ್ಲಿ ಕೆತ್ತಲಾದ ಪೇಜಾವರ ಶ್ರೀಗಳ ಚಿತ್ರ, ಇತಿಹಾಸ ಪ್ರಸಿದ್ಧ ಗೋಲ್ ಗುಂಬಜ್, ಪುಷ್ಪಗಳ ಸಾಲು ನೋಡುಗರ ಕಣ್ಮನ ಸೆಳೆದವು. ಇನ್ನು ಬಗೆ ಬಗೆಯ ಫಲಪುಷ್ಪಗಳ ಕುರಿತ ಮಾಹಿತಿಯನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಿದರು.
ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ, ಸಂಪಿಗೆ, ಸೇರಿದಂತೆ ದೇಶಿ ಹಾಗೂ ವಿದೇಶಿ ತಳಿಗಳ ಹೂವು ಹಾಗೂ ಹಣ್ಣುಗಳು, ಔಷಧಿ ಗುಣವುಳ್ಳ ಸಸಿಗಳು ಹಾಗೂ ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ ತರಕಾರಿ ತಳಿಗಳನ್ನು ರೈತರಿಗೆ ಪರಿಚಯಿಸಲಾಯಿತು.