ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನದಿಗೆ ಹೊಂದಿಕೊಂಡಿರುವ ನಗರ. ಈ ನದಿಯಲ್ಲಿ ಮೊಸಳೆಗಳಿದ್ದರೂ ಸಹ ಜನರಿಗೆ ಯಾವುದೇ ರೀತಿಯ ಹಾನಿ ಮಾಡಿರಲಿಲ್ಲ. ಆದ್ರೀಗ ಇಲ್ಲಿನ ನಿವಾಸಿಗಳು ನದಿಗೆ ಇಳಿಯುವುದಕ್ಕೆ, ನದಿ ಬಳಿ ತೆರಳುವುದಕ್ಕೂ ಭಯಪಡಬೇಕಾದ ಸ್ಥಿತಿ ಉದ್ಭವಿಸಿದೆ.
ಜನಸ್ನೇಹಿ ಎನ್ನುವಂತೆ ಜನವಸತಿ ಪ್ರದೇಶದಲ್ಲಿ ತಿರುಗಾಡಿಕೊಂಡಿದ್ದ ಮೊಸಳೆಗಳೀಗ ತಮ್ಮ ವರಸೆ ಬದಲಾಯಿಸಿವೆ. ಸೋಮವಾರ ದಾಂಡೇಲಿಯ 24 ವರ್ಷದ ಯುವಕನೋರ್ವನನ್ನು ಮೊಸಳೆ ಎಳೆದೊಯ್ದಿತ್ತು. ಮಂಗಳವಾರ ಆತ ಶವವಾಗಿ ಪತ್ತೆಯಾಗಿದ್ದ. ಇದು ಸ್ಥಳೀಯರ ಆತಂಕ ಹೆಚ್ಚಿಸಿದೆ. ನದಿಯಲ್ಲಿ ಕಣ್ಮರೆಯಾಗಿದ್ದ ಯುವಕ ಶವವಾಗಿ ದೊರೆತಿದ್ದು, ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಸಂಬಂಧಿಕರು, ಸಾರ್ವಜನಿಕರು ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ದಾಂಡೇಲಿಯು ಕಾಳಿ ನದಿಗೆ ಹೊಂದಿಕೊಂಡಿರುವ ನಗರ. ಜನರು ಪ್ರತಿನಿತ್ಯ ಬಟ್ಟೆ ತೊಳೆಯಲು, ದಿನಬಳಕೆ ನೀರಿಗಾಗಿ ಹಾಗೂ ಜಾನುವಾರುಗಳಿಗೆ ನೀರು ಕುಡಿಸಲು ಇದೇ ನದಿಯನ್ನು ಅವಲಂಬಿಸಿದ್ದಾರೆ. ತಮ್ಮ ಅಗತ್ಯತೆಗಳಿಗಾಗಿ ಜನರು ನದಿಗೆ ತೆರಳುವುದು ಹಿಂದಿನಿಂದಲೂ ರೂಢಿಯಲ್ಲಿದ್ದು, ಮೊಸಳೆಗಳಿದ್ದರೂ ಸಹ ಯಾವುದೇ ಆತಂಕವಿಲ್ಲದೇ ನದಿಗೆ ತೆರಳುತ್ತಿದ್ದರು. ಅಲ್ಲದೇ ಸಾಕಷ್ಟು ಬಾರಿ ನದಿ ಪಕ್ಕದ ಜನವಸತಿ ಪ್ರದೇಶದಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿದ್ದರೂ ಸಹ ಯಾರೊಬ್ಬರಿಗೂ ಹಾನಿ ಮಾಡಿರಲಿಲ್ಲ.
ಯುವಕ ಬಲಿ: ಮಾನವಸ್ನೇಹಿ ಎನಿಸಿಕೊಂಡಿದ್ದ ಇದೇ ಮೊಸಳೆಗಳು ಇತ್ತೀಚಿನ ದಿನಗಳಲ್ಲಿ ನರಹಂತಕರಂತೆ ವರ್ತಿಸುತ್ತಿವೆ. ಕಳೆದ ಎರಡೂವರೆ ತಿಂಗಳ ಹಿಂದೆ ಹಳಿಯಾಳ ರಸ್ತೆ ಬಳಿ ಬಾಲಕನೋರ್ವನನ್ನು ಮೊಸಳೆ ತಿಂದು ಹಾಕಿದೆ. ಇದಾದ ಬಳಿಕ ಕಳೆದ ತಿಂಗಳು ಮೊಸಳೆ ಬಾಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ಇದೀಗ ಮೊಸಳೆಯಿಂದ ದಾಂಡೇಲಿಯ 24 ವರ್ಷದ ಯುವಕ ಬಲಿಯಾಗಿದ್ದಾನೆ.
ಸಾರ್ವಜನಿಕರ ಆಕ್ರೋಶ: ದಾಂಡೇಲಿಯ ಪಟೇಲನಗರ ನಿವಾಸಿ ಅರ್ಷದ್ ಖಾನ್(24) ಫೆ.7 ರಂದು ಕೆಲಸ ಮುಗಿಸಿ ಕೈಕಾಲು ತೊಳೆಯಲು ಕಾಳಿ ನದಿಯ ಬಳಿ ತೆರಳಿದ್ದ. ಈ ವೇಳೆ ಆತನನ್ನು ಮೊಸಳೆ ಎಳೆದೊಯ್ದಿದೆ. ಆತನ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿತ್ತಾದರೂ ಸುಳಿವು ಸಿಕ್ಕಿರಲಿಲ್ಲ. ಮಂಗಳವಾರ ಸಂಜೆ ವೇಳೆ ಕಾಳಿ ನದಿ ತಟದಲ್ಲಿ ಯುವಕನ ಶವ ಪತ್ತೆಯಾಗಿದೆ. ಮೊಸಳೆ ದಾಳಿಯಿಂದ ಯುವಕನ ಪ್ರಾಣ ಹೋಗಿದೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆಗೆ ರಾಜ್ಯ ಸಂಪುಟ ಸಭೆ ಒಪ್ಪಿಗೆ
ಇತ್ತೀಚಿನ ದಿನಗಳಲ್ಲಿ ಮೊಸಳೆ ದಾಳಿ ಪ್ರಕರಣಗಳು ಮರುಕಳಿಸುತ್ತಿದ್ದು, ಇವುಗಳ ನಿಯಂತ್ರಣಕ್ಕೆ ನದಿ ತೀರದಲ್ಲಿ ತಂತಿ ಬೇಲಿಗಳನ್ನು ಅಳವಡಿಸುವಂತೆ ಜನರು ಒತ್ತಾಯಿಸಿದ್ದಾರೆ. ನಗರದಲ್ಲಿ 3 ಕೋಟಿ ರೂ ವೆಚ್ಛದಲ್ಲಿ ನಿರ್ಮಾಣ ಮಾಡಿರುವ ಮೊಸಳೆ ಪಾರ್ಕ್ ಪ್ರವಾಸಿಗರನ್ನೇನೋ ಆಕರ್ಷಿಸುತ್ತಿದೆ. ಆದ್ರೆ ನರಹಂತಕ ಮೊಸಳೆಗಳ ದಾಳಿ ಸ್ಥಳೀಯರನ್ನು ಭಯಭೀತಗೊಳಿಸುತ್ತಿದ್ದು, ಈ ಬಗ್ಗೆ ಸಂಬಂಧಟ್ಟವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.