ಶಿರಸಿ: ಕಾಡುಕುರಿಯನ್ನು ಕೊಂದು ಮಾಂಸ ಬೇಯಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಸೋಂದಾ ಹಗೆದಮನೆಯಲ್ಲಿ ನಡೆದಿದೆ.
ಹುಲೇಕಲ್ ಉಪವಲಯದ ಹಗೆದಮನೆಯ ಪುಟ್ಟಾ ಹುಲಿಯಾ ಗೌಡ ಬಂಧಿತ ಆರೋಪಿ. ಈತ ಹಾಗೂ ಇನ್ನೋರ್ವ ಆರೋಪಿ ಪ್ರಭಾಕರ ಪುಟ್ಟು ಗೌಡ ಎಂಬಾತ ಸೇರಿಕೊಂಡು ಕಾಡುಕುರಿ ಕೊಂದು ಅದನ್ನು ಬೇಯಿಸುತ್ತಿದ್ದರು. ಮಾಹಿತಿ ಮೆರೆಗೆ ದಾಳಿ ನಡೆಸಿದ ಹುಲೇಕಲ್ ಆರ್ಎಫ್ಒ ಬಸವರಾಜ ಬೋಚಳ್ಳಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಕಾಡುಕುರಿ ಚರ್ಮ, ಮಾಂಸ ಎರಡು ದ್ವಿಚಕ್ರ ವಾಹನಗಳು, ಕತ್ತಿ ಮತ್ತು ಚೂರಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಪ್ರಭಾಕರ ಪುಟ್ಟು ಗೌಡ ತಲೆಮರೆಸಿಕೊಂಡಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.