ಕಾರವಾರ: ಕೇಂದ್ರ ಸ್ಥಾನ ತೊರೆಯದಂತೆ ಆದೇಶವಿದ್ದರೂ ಕರ್ತವ್ಯಲೋಪ ಎಸಗಿದ ಮೂವರು ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ, ಓರ್ವರನ್ನು ಕರ್ತವ್ಯದಿಂದ ವಜಾಗೊಳಿಸಿ ಉತ್ತರಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್, ವೈ ಮಣ್ಣವಡ್ಡರ ಅವರನ್ನು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ವಜಾಗೊಳಿಸಿದ್ದು, ಭಟ್ಕಳ, ಕುಮಟಾ ಹಾಗೂ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಾದ ಡಿ ದೇವರಾಜ, ಸುರೇಶ ಎಂ.ಕೆ ಹಾಗೂ ಬಿ. ಪ್ರಹ್ಲಾದ ಎಂಬವರಿಗೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನಲೆ ತಾಲೂಕಿನ ವಿವಿಧ ಇಲಾಖೆ ಮುಖ್ಯಾಧಿಕಾರಿಗಳಿಗೆ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆಯದಂತೆ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ ತಮ್ಮ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಯಾಗುವ ಪ್ರದೇಶಗಳ ಮೇಲೆ ನಿಗಾ, ಸ್ವಚ್ಚತೆ ಸೇರಿದಂತೆ ತುರ್ತು ಕ್ರಮಕೈಗೊಳ್ಳಬೇಕಾದ ಜವಬ್ದಾರಿ ನೀಡಿ ಆದೇಶಿಸಲಾಗಿದೆ.
ಆದೇಶ ಉಲ್ಲಂಘಿಸಿದ ಅಧಿಕಾರಿಗಳು ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ತೊರೆದು ಕರ್ತವ್ಯಲೋಪ ಎಸಗಿದ್ದರು. ಅದರಲ್ಲೂ ಹೊನ್ನಾವರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಚ್, ವೈ ಮಣ್ಣವಡ್ಡರ ವಿರುದ್ಧ ಸರ್ಕಾರದ ಹಣ ದುರುಪಯೋಗ, ಸಭೆಗೆ ಹಾಜರಾಗದಿರುವುದು, ನೋಟೀಸ್ ಗೆ ಉತ್ತರ ನೀಡದೇ ನಿರ್ಲಕ್ಷ್ಯ, ಅನಧಿಕೃತ ಕಾಮಗಾರಿ ನಡೆಸುವ ಆರೋಪ, ತೆರಿಗೆ ಹಣ ಪಾವತಿಸದಿರುವುದು, ಮೀನುಗಾರರಿಂದ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಮತ್ತು ಭಟ್ಕಳ ಉಪ ವಿಭಾಗಾಧಿಕಾರಿಯವರ ತನಿಖಾ ವರದಿ ಉಲ್ಲೇಖಿಸಿ ವೈ ಮಣ್ಣವಡ್ಡರ ಅವರನ್ನು ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ಕುಮಟಾ ಪುರಸಭೆ ಕಚೇರಿ ವ್ಯವಸ್ಥಾಪಕ ನೀಲಕಂಠ ಎಂ ಮೇಸ್ತಾ ಅವರನ್ನು ಮುಂದಿನ ಆದೇಶದವರೆಗೆ ಪ್ರಭಾರ ಮುಖ್ಯ ಅಧಿಕಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.