ಕಾರವಾರ: ಸಮ್ಮಿಶ್ರ ಸರ್ಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಿರುವ ನಾಲ್ವರು ಶಾಸಕರ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡಲ್ಲಿ ಎಲ್ಲರೂ ಬುದ್ಧಿ ಕಲಿಯುತ್ತಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರಾದ ರಮೇಶ್ ಜಾರಕಿಹೋಳಿ, ಮಹೇಶ್ ಕುಮಟಳ್ಳಿ, ಪಕ್ಷೇತರ ಶಾಸಕರಾದ ಶಂಕರ್ ಹಾಗೂ ನಾಗೇಶ್ ನಿರಂತರವಾಗಿ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆ. ಇಂತವರ ವಿರುದ್ಧ ಸ್ಪೀಕರ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಮತ್ತೆ ಅಧಿವೇಶನಕ್ಕೆ ಬರಲು ಸಾಧ್ಯವಿಲ್ಲ. ಪುನಃ ಆಯ್ಕೆಯಾಗಿಯೇ ಬರಬೇಕು. ಆಗ ಇತರರು ಇಂತಹ ತಪ್ಪನ್ನು ಮಾಡಲು ಮುಂದಾಗುವುದಿಲ್ಲ ಎಂದು ಹೇಳಿದರು.
ಶಾಸಕ ಸ್ಥಾನಗಳಿಂದ ಅನರ್ಹಗೊಂಡರೆ ಏನಾಗುತ್ತದೆ ಎಂಬುದನ್ನು ನಾನು ಈ ಹಿಂದೆ 8 ತಿಂಗಳು ಅನುಭವಿಸಿದ್ದೇನೆ. ಇತ್ತ ಮನೆಗೂ ಹೊಗಲಾಗದೇ ಅತ್ತ ಜನರನ್ನು ಭೇಟಿಯಾಗಲಾಗದೇ ಅತಂತ್ರವಾಗಿ ಇರಬೇಕಾದ ಸ್ಥಿತಿ ಇತ್ತು. ಅಂತಹ ಸಮಯದಲ್ಲಿ ನ್ಯಾಯ ಸಿಕ್ಕರೆ ಸಾಕು ಎಂಬ ಸ್ಥಿತಿ ನನ್ನದಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ನ್ಯಾಯ ಓದಗಿಸಿತ್ತು. ಇದೀಗ ಆ ಬಗ್ಗೆ ಯೋಚನೆ ಮಾಡಿದರು ಹೆದರಿಕೆಯಾಗುತ್ತದೆ ಎಂದರು.
ಆದ್ದರಿಂದ ಶಾಸಕರುಗಳು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದು ಕುಮಾರಸ್ವಾಮಿ ಅವರ ಸರ್ಕಾರವನ್ನು ಬೆಂಬಲಿಸಬೇಕು. ಇಲ್ಲೇ ಸಿಗುವ ಅಧಿಕಾರದ ಮೂಲಕ ಆಡಳಿತ ನಡೆಸಬೇಕು. ಬಿಜೆಪಿಗೆ ಹೋದರೆ ಮುಖ್ಯಮಂತ್ರಿ ಮಾಡುವುದಿಲ್ಲ. ಮುಂಬೈ, ಗೋವಾ ತೆರಳಿರುವ ಶಾಸಕರು ಮರಳಿ ಬರಬೇಕು. ಅಲ್ಲದೆ ಮೊದಲಿನಿಂದಲೂ ಅರಾಜಕತೆ ಸೃಷ್ಟಿಸುತ್ತಿರುವ ನಾಲ್ವರು ಶಾಸಕರುಗಳ ವಿರುದ್ಧ ಸ್ಪೀಕರ್ ಕ್ರಮ ಕೈಗೊಂಡಲ್ಲಿ ಆ ನೋವು ಇತರ ಶಾಸಕರುಗಳಿಗೆ ಅರ್ಥವಾಗಲಿದೆ ಎಂದು ಹೇಳಿದರು.