ಕಾರವಾರ : ಹೊನ್ನಾವರದಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಗೆ ಆರಂಭದಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಆಮೆಗಳ ನೆಲೆ ಇರುವ ಪ್ರದೇಶದಲ್ಲಿ ಬಂದರು ನಿರ್ಮಾಣವಾಗುತ್ತಿದೆ ಎಂದು ಮೀನುಗಾರರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಕಾಮಗಾರಿ ಕಾರ್ಯ ಮಾಡಲಾಗುತ್ತಿದೆ.
ಕಳೆದೆರಡು ತಿಂಗಳ ಹಿಂದೆ ಕಾಸರಕೋಡು ಅಳಿವೆ ಪ್ರದೇಶದಲ್ಲಿ ಮೂರು ಕಡೆ ಆಮೆ ಗೂಡುಗಳು ಇರುವುದು ಪತ್ತೆಯಾಗಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಆಮೆಗಳು ಮೊಟ್ಟೆ ಇಟ್ಟ ಪ್ರದೇಶದಲ್ಲೇ ಅವುಗಳಿಗೆ ಪಂಜರ ನಿರ್ಮಿಸಿ ಮೊಟ್ಟೆಗಳನ್ನ ಸಂರಕ್ಷಿಸಲಾಗಿತ್ತು.
ನಿನ್ನೆ ತಡರಾತ್ರಿಯಿಂದ ಮರಿಗಳು ಹೊರ ಬರುತ್ತಿದ್ದು, ಅವುಗಳನ್ನ ಸುರಕ್ಷಿತವಾಗಿ ಇರಿಸಿದ್ದ ಸ್ಥಳೀಯ ಮೀನುಗಾರರು ಇಂದು ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನೂರಕ್ಕೂ ಅಧಿಕ ಆಮೆಯ ಮರಿಗಳನ್ನ ಸಮುದ್ರಕ್ಕೆ ಸೇರಿಸಿದ್ದಾರೆ.
ಮೀನುಗಾರಿಕೆ ನಡೆಸಲು ಅವಲಂಬಿತವಾಗಿರುವ ಹಾಗೂ ಕಡಲಾಮೆಗಳ ಆವಾಸಸ್ಥಾನವಿರುವ ಪ್ರದೇಶದಲ್ಲಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದಾಗಿ ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿ, ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೀನುಗಾರರ ವಾದಕ್ಕೆ ಅಳಿವಿನಂಚಿನಲ್ಲಿರುವ ಆಲೀವ್ ರಿಡ್ಲೇ ಆಮೆ ಮೊಟ್ಟೆಗಳು ಮರಿಯಾಗಿರುವುದು ಪುಷ್ಠೀಕರಿಸಿದಂತಾಗಿದೆ.
ಆಲಿವ್ ರಿಡ್ಲೇ ಪ್ರಬೇಧದ ಕಡಲಾಮೆಯ ಮರಿಗಳು ಇವಾಗಿದ್ದು, ಇಂತಹ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಕೈಗೊಳ್ಳುವುದರಿಂದ ಅವುಗಳ ಸಂತತಿ ನಾಶಕ್ಕೆ ಕಾರಣವಾಗುತ್ತದೆ ಅನ್ನೋದು ಕಡಲಜೀವ ವಿಜ್ಞಾನಿಗಳ ಅಭಿಪ್ರಾಯ. ಮೀನುಗಾರರ ವಿರೋಧ ಇದ್ದರೂ ಬಂದರಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಬಂದರು ನಿರ್ಮಾಣ ಮಾಡುವುದರಿಂದ ಮೀನುಗಾರರಿಗೆ ಅವರನ್ನು ಒಕ್ಕಲೆಬ್ಬಿಸುವ ಭಯವೂ ಇದೆ.
ಶರಾವತಿ ಅಳಿವೆ ಪ್ರದೇಶವಾದ ಕಾಸರಗೋಡು, ಮಲ್ಲುಕುರ್ವಾ ಹಾಗೂ ಪಾವಿನಕುರ್ವಾ ಭಾಗದಲ್ಲಿ ವಾಣಿಜ್ಯ ಬಂದರನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಈ ಪ್ರದೇಶ ಮೀನುಗಾರರಿಗೆ ಸೇರಿದ್ದಾಗಿದ್ದು, ಅಕ್ರಮವಾಗಿ ಹೊನ್ನಾವರ ಪ್ರೈವೇಟ್ ಪೋರ್ಟ್ ಲಿಮಿಟೆಡ್ ಕಂಪನಿಗೆ ಜಾಗವನ್ನ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಉದ್ದೇಶಿತ ಬಂದರು ಪ್ರದೇಶದಲ್ಲಿ ಕಡಲಾಮೆಗಳ ಓಡಾಟದ ಕುರಿತು ಅಧ್ಯಯನ ನಡೆಸಲು ಚೆನ್ನೈ ಮೂಲದ ಕೇಂದ್ರದ ಸಂಸ್ಥೆಯೊಂದನ್ನು ನೇಮಕ ಮಾಡಲಾಗಿದೆ. ಅದರ ವರದಿ ಆಧರಿಸಿ ಕೋರ್ಟ್ ಕ್ರಮಕೈಗೊಳ್ಳಲಿದೆ. ಆದರೆ, ರಸ್ತೆ ನಿರ್ಮಾಣಕ್ಕೆ ಇದರಿಂದ ಯಾವುದೇ ಅಡ್ಡಿ ಇಲ್ಲ. ಅಲ್ಲಿನ ಸಾರ್ವಜನಿಕರೂ ಸಹ ಸಹಕರಿಸುವಂತೆ ತಿಳಿಸಿದ್ದಾರೆ.
ವಿವಾದಿತ ಕೇಂದ್ರ ಬಿಂದುವಾಗಿರುವ ಕಾಸರಕೋಡು ಬಂದರು ಪ್ರದೇಶದಲ್ಲಿ ಇದೀಗ ಕಡಲಾಮೆ ಮರಿಗಳ ಜನನದಿಂದ ಮೀನುಗಾರರ ವಾದಕ್ಕೆ ಬೆಂಬಲ ಸಿಕ್ಕಂತಾಗಿರೋದಂತೂ ಸತ್ಯ. ಇನ್ನು ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಕೇಂದ್ರದ ತಂಡ ಯಾವ ವರದಿಯನ್ನ ನೀಡಲಿದೆ ಅನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಬ್ರಿಟಿಷ್ ಕೌನ್ಸಿಲ್ ಜತೆ 3 ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ