ಭಟ್ಕಳ/ಉತ್ತರ ಕನ್ನಡ: ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ನಿಷೇಧ ಹೇರಿದ್ದು, ಈದ್ ಮಿಲಾದ್ ಸಂದರ್ಭದಲ್ಲಿ ಯಾರಾದರೂ ಟಿಪ್ಪು ಬಟ್ಟೆ, ಧ್ವಜ ಹಾರಿಸಿ ಟಿಪ್ಪು ಜಯಂತಿ ಆಚರಿಸಲು ಹೊರಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭಟ್ಕಳದ ಎಎಸ್ಪಿ ನಿಖಿಲ್ ಬಿ. ಎಚ್ಚರಿಕೆ ನೀಡಿದ್ದಾರೆ.
ಈದ್ ಮಿಲಾದ್ ಪ್ರಯುಕ್ತ ತಾಲೂಕಿನ ಶಹರಾ ಠಾಣೆಯಲ್ಲಿ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದ್ರು. ಈ ಬಗ್ಗೆ ಸಮಾಜದ ಹಿರಿಯರು, ಯುವಕರು ಹಾಗೂ ಮಕ್ಕಳಿಗೆ ತಿಳಿಹೇಳಬೇಕು ಎಂದು ಸೂಚಿಸಿದರು. ಭಟ್ಕಳದಲ್ಲಿ ವಿಭಿನ್ನ ಕೋಮುಗಳ ನಡುವೆ ಸೌಹಾರ್ದತೆ ಬೆಸೆದುಕೊಂಡಿರುವುದು ಸಂತಸದ ಸಂಗತಿಯಾಗಿದೆ. ಕಷ್ಟದ ನಂತರ ಎಲ್ಲರೂ ಜೊತೆಯಾಗಿ ಹೋದರೆ ಮಾತ್ರ ಸರ್ವರಿಗೂ ಏಳಿಗೆ ಎನ್ನುವುದನ್ನು ಅರ್ಥೈಸಿಕೊಂಡಿದ್ದಾರೆ.
ಭಟ್ಕಳ ಈಗ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಪಟ್ಟಣವಾಗಿದ್ದು, ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಶಾಂತಿ ಪಾಲನೆಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.