ಕಾರವಾರ: ಕಡಲತೀರದಲ್ಲಿ ಲಂಗರು ಹಾಕಿದ್ದ ದೋಣಿವೊಂದರ ಆ್ಯಂಕರ್ ತೆಗೆದು ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಸ್ಥಳೀಯರಾದ ಹರೀಶ್ ಹರಿಕಂತ್ರ ಎಂಬುವವರಿಗೆ ಸೇರಿದ ಸಿಕ್ಕಿಂಗ್ ಎಂಬ ಹೆಸರಿನ ಈ ದೋಣಿಗೆ ಹಾನಿಯಾಗಿದೆ. ನೇತ್ರಾಣಿ ದ್ವೀಪದ ಬಳಿ ವೆಸ್ಟ್ ಕೋಸ್ಟ್ ಸ್ಕೂಬಾ ಡೈವರ್ಸ್ ಅವರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲೆಂದು ಬಳಸುವ ದೋಣಿಯನ್ನು ಎಂದಿನಂತೆ ಕಡಲತೀರದಲ್ಲಿ ಆ್ಯಂಕರ್ ಹಾಕಿ ನಿಲ್ಲಿಸಲಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಆ್ಯಂಕರ್ ಎತ್ತಿಟ್ಟ ಕಾರಣ ದೋಣಿಯು ಅಲೆಗೆ ಸಿಲುಕಿ ಡೀಸೆಲ್ ಟ್ಯಾಂಕ್ ಒಡೆದಿದೆ.
![boat damaged](https://etvbharatimages.akamaized.net/etvbharat/prod-images/kn-kwr-03-donnigehani-7202800_03102019203335_0310f_1570115015_1017.jpg)
ಇದರಿಂದ ಇಂಧನವೆಲ್ಲ ಸಮುದ್ರದಲ್ಲಿ ಸೋರಿಕೆಯಾಗಿದ್ದು, ದೋಣಿಯಲ್ಲೂ ರಂಧ್ರವಾಗಿ ನೀರು ತುಂಬಿಕೊಂಡಿದೆ. ಈ ಬಗ್ಗೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡು, ದೋಣಿಗೆ ಉಂಟಾದ ಹಾನಿಯನ್ನು ತಪ್ಪಿತಸ್ಥರಿಂದ ಕೊಡಿಸಬೇಕು ಎಂದು ದೋಣಿ ಮಾಲಿಕರು ಆಗ್ರಹಿಸಿದ್ದಾರೆ.