ಕಾರವಾರ: ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಫೆಬ್ರವರಿ 11 ರಿಂದ 17ರವರೆಗೆ ಮೆಗಾ ಉದ್ಯಮಿ ಸಂತೆಯನ್ನು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇಶಪಾಂಡೆ ಫೌಂಡೇಶನ್ ಉತ್ತರಕನ್ನಡ ವಿಭಾಗ ಮ್ಯಾನೇಜರ್ ಪ್ರಸನ್ನ ಕುಲಕರ್ಣಿ ಹೇಳಿದರು.
ನಗರದಲ್ಲಿ ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ದೇಶಪಾಂಡೆ ಫೌಂಡೇಶನ್ ವತಿಯಿಂದ ಸಣ್ಣ ಉದ್ದಿಮೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ಮತ್ತು ಅವರ ಬ್ರಾಂಡ್ಗಳನ್ನು ಜನಸಾಮಾನ್ಯರಿಗೆ ದೊಡ್ಡಮಟ್ಟದಲ್ಲಿ ಪರಿಚಯಿಸಲು ಇಂತಹ ವೇದಿಕೆ ಕಲ್ಪಿಸಲಾಗುತ್ತಿದೆ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಫೆ. 11 ರಿಂದ ಒಂದು ವಾರ ಉದ್ಯಮಿ ಸಂತೆ ನಡೆಯಲಿದ್ದು, ಸ್ಥಳೀಯವಾಗಿಯೇ ತಯಾರಿಸಿದ ಆಹಾರ ಪದಾರ್ಥಗಳು, ಸಿಹಿ ತಿಂಡಿ, ಸಿರಿಧಾನ್ಯಗಳು, ಕರಕುಶಲ ವಸ್ತುಗಳು, ಉಡುಪು, ಗೃಹ ಅಲಕಾಂರಿಕ ವಸ್ತುಗಳ ಮಾರಾಟ ನಡೆಯಲಿದೆ. ಸುಮಾರು 150 ಕ್ಕೂ ಹೆಚ್ಚು ಮಳಿಗೆಗಳನ್ನು ಇಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ದೇಶಪಾಂಡೆ ಫೌಂಡೇಶನ್ ಯಾವುದೇ ಲಾಭವಿಲ್ಲದೆ ಕೇವಲ ಸ್ಥಳೀಯರಿಂದ ತಯಾರಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ಆ ಮೂಲಕ ಅವರನ್ನು ಸದೃಢರನ್ನಾಗಿಸುವ ಮತ್ತು ಮಾರುಕಟ್ಟೆಗಳಲ್ಲಿ ಅವರ ಬ್ರಾಂಡ್ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಕಳೆದ ಕೆಲ ವರ್ಷಗಳಿಂದ 90 ಕ್ಕೂ ಹೆಚ್ಚು ಸಂತೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸಿದ್ದು ಸಾವಿರಾರು ಗ್ರಾಮೀಣ ಪ್ರದೇಶದ ಮಹಿಳೆಯರು ಹಾಗೂ ಸಣ್ಣ ಉದ್ದಿಮೆಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬೆನ್ನೆಲುಬಾಗಿದೆ ಎಂದು ಹೇಳಿದರು.
ಇನ್ನು ಉದ್ಯಮ ಸಂತೆಯಲ್ಲಿ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮಳಿಗೆ ಪಡೆಯಲು ಫೆ.10 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 8880964624, 7022111378 ಕರೆ ಮಾಡಬಹುದಾಗಿದೆ.