ಕಾರವಾರ: ಇನ್ಸ್ಟಾಗ್ರಾಮ್ಗೆ ಹಾಕಿದ ಫೋಟೋ ಮೂಲಕ ಮಾಜಿ ಪ್ರೇಯಸಿಯ ಜಾಡು ಹುಡುಕಿ ಗೋಕರ್ಣಕ್ಕೆ ಬಂದಿದ್ದ ಭಗ್ನ ಪ್ರೇಮಿಯೋರ್ವ, ಮಾಜಿ ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಪುಣೆಯಲ್ಲಿ ತಲೆಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಪುಣೆ ಮೂಲದ ತುಷಾರ್ ಮರಾಠೆ ಬಂಧಿತ ಆರೋಪಿ. ಜುಲೈ 7ರಂದು ಬೆಂಗಳೂರಿನಿಂದ ಗೋಕರ್ಣದ ಕುಡ್ಲೆ ಬೀಚ್ಗೆ ಸ್ನೇಹಿತರ ಜೊತೆ ಬಂದಿದ್ದ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ನೊಂದ ಮಹಿಳೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಸದ್ಯ ಆರೋಪಿ ತುಷಾರ್ ಮರಾಠೆಯನ್ನು ಬಂಧಿಸಿದ್ದಾರೆ.
ಮಾಜಿ ಪ್ರೇಯಸಿ ರೂಮ್ ಪಕ್ಕದ ರೂಮ್ ಅನ್ನೇ ಬಾಡಿಗೆ ಪಡೆದಿದ್ದ ಆರೋಪಿ
ಆರೋಪಿ ಹಾಗೂ ಹಲ್ಲೆಗೊಳಗಾದ ಮಹಿಳೆ ಪರಸ್ಪರ ದೂರವಾಗಿದ್ದರು ಎನ್ನಲಾಗ್ತಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಈಕೆ, ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದಳು. ಜೊತೆಗೆ ಕುಡ್ಲೆ ಬೀಚ್ನಲ್ಲಿರುವ ಸೆಲ್ಫಿ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಳು. ಫೋಟೋ ನೋಡಿ ಲೊಕೇಶನ್ ಸರ್ಚ್ ಮಾಡುತ್ತಾ ಮುಂಬೈನಿಂದ ಕುಮಟಾ, ಅಲ್ಲಿಂದ ಗೋಕರ್ಣಕ್ಕೆ ಬಂದ ತುಷಾರ್ ಮರಾಠೆ, ಮಾಜಿ ಪ್ರೇಯಸಿ ಉಳಿದುಕೊಂಡಿದ್ದ ರೂಮ್ ಪಕ್ಕದ ರೂಮ್ ಅನ್ನೇ ಬಾಡಿಗೆ ಪಡೆದಿದ್ದ.
ಮಾಜಿ ಪ್ರೇಯಸಿಯ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಆರೋಪಿ, ಆಕೆಯ ಗೆಳತಿಯರೆಲ್ಲಾ ಡೈನಿಂಗ್ ಹಾಲ್ಗೆ ಹೋಗಿದ್ದ ಸಮಯದಲ್ಲಿ ರೂಮ್ನಲ್ಲಿ ಒಬ್ಬಳೇ ಇರುವುದನ್ನು ಖಾತರಿಪಡಿಸಿಕೊಂಡು ದಾಳಿ ಮಾಡಿದ್ದಾನೆ. ಹೇರ್ ಡ್ರೈಯರ್ ವೈರ್ನಿಂದ ಆಕೆಯ ಕುತ್ತಿಗೆ ಬಿಗಿದು, ಪೆನ್ನಿಂದ ಕಣ್ಣು ಮತ್ತು ಮುಖಕ್ಕೆ ಚುಚ್ಚಿ, ದಿಂಬಿನಿಂದ ಉಸಿರುಗಟ್ಟಿಸಿದಾಗ ಆಕೆ ಮೂರ್ಚೆ ಹೋಗಿದ್ದು, ಸತ್ತಿದ್ದಾಳೆಂದು ಭಾವಿಸಿ ಅಲ್ಲಿಂದ ನಾಪತ್ತೆಯಾಗಿದ್ದ. ಬಳಿಕ ಆಕೆಯನ್ನು ಅವರ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ನೇತೃತ್ವದ ಒಂದು ಮತ್ತು ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ ಅವರ ನೇತೃತ್ವದ ಇನ್ನೊಂದು ತಂಡ ರಚಿಸಿ, ಮಹರಾಷ್ಟ್ರದ ಪೂನಾ ಕಡೆಗೆ ತನಿಖೆಗೆ ಕಳುಹಿಸಿದ್ದರು.
ಸದ್ಯ, ತಲೆ ಬೋಳಿಸಿಕೊಂಡು ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಮೊಬೈಲ್ ಜಾಡು ಹಿಡಿದು ಪುಣೆಯಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ: ಬ್ರಹ್ಮಾವರದ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯ ಬರ್ಬರ ಕೊಲೆ..!