ಕಾರವಾರ : ಪ್ರಕೃತಿಯಲ್ಲಿ ದೇವರನ್ನು ಕಾಣುವ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಜಾನಪದ ಆಚರಣೆಗಳು ರೂಢಿಯಲ್ಲಿವೆ. ಕೆಲ ಸಂಪ್ರದಾಯಗಳು ಆಧುನಿಕ ಭರಾಟೆಯಲ್ಲಿ ಸ್ವಲ್ಪ ಮರೆಯಾಗಿದ್ದರೂ ಸಹ ಇಂದಿಗೂ ಕೆಲವೆಡೆ ಹಳೇ ಪದ್ಧತಿಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲಿ ಕರಾವಳಿಯಲ್ಲಿ ಆಚರಿಸಲಾಗುವ ಹೊಸ್ತು ಹಬ್ಬ ಕೂಡ ವಿಶೇಷವಾಗಿದೆ.
ಹೌದು, ಮೂರ್ನಾಲ್ಕು ತಿಂಗಳ ಮಳೆಗಾಲದಲ್ಲಿ ಗದ್ದೆ ಉಳುಮೆಗೈದು, ಬೆಳೆ ಬೆಳೆದ ಕರಾವಳಿಯ ರೈತರಿಗೆಲ್ಲ ಈಗ ಗದ್ದೆಗಳಲ್ಲಿ ಹೊಸ ತೆನೆ ಬರುವ ಸಂದರ್ಭ. ಈ ಸಂದರ್ಭವನ್ನು ಹೊಸ್ತು ಹಬ್ಬ ಅಥವಾ ಕದಿರಿನ ಹಬ್ಬವಾಗಿ ಆಚರಿಸಲಾಗುತ್ತಿದ್ದು, ಕರಾವಳಿಯಲ್ಲೆಡೆ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ. ಹೊಸ್ತು ಎಂದರೆ ಹೊಸತು ಎಂದರ್ಥ. ಈಗ ಕರಾವಳಿಯಲ್ಲಿ ಭತ್ತದ ಕಟಾವು ಕಾರ್ಯ ನಡೆಯುವುದರಿಂದ ಹೊಸ ತೆನೆ ಅಥವಾ ಕದಿರನ್ನು ಸ್ವಾಗತಿಸಿಕೊಳ್ಳುವ ಜಾನಪದ ಸಂಪ್ರದಾಯವೇ ಈ ಹಬ್ಬದ ಉದ್ದೇಶವಾಗಿದೆ. ನವರಾತ್ರಿಯ ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ದೇವರಿಗೆ ಗ್ರಾಮಸ್ಥರೆಲ್ಲ ಸೇರಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಈ ಹಬ್ಬವನ್ನು ಗ್ರಾಮದ ಪ್ರತಿ ಮನೆಗಳಲ್ಲೂ ಆಚರಿಸಲಾಗುತ್ತದೆ.
ಪ್ರತಿ ಕುಟುಂಬವೂ ಮನೆಯ ತುಳಸಿಕಟ್ಟೆಗೆ ನಮಿಸಿ, ಗದ್ದೆಗಳಿಗೆ ತೆರಳಿ ಅಲ್ಲಿ ಹೊಸ ಕದಿರಿಗೆ ಪೂಜೆ ಸಲ್ಲಿಸುವುದು ಈ ಹಬ್ಬದ ಸಂಪ್ರದಾಯ. ಈ ಹಬ್ಬದಿಂದ ಅನ್ನದಾತ ರೈತ ಮತ್ತು ಪ್ರಕೃತಿಯ ನಡುವಿನ ಸಂಬಂಧ, ಅವಿಭಕ್ತ ಕುಟುಂಬದ ಒಗ್ಗಟ್ಟು, ಧರ್ಮ ಮತ್ತು ಧಾರ್ಮಿಕತೆ ಹಾಗೂ ಹಿರಿಯರಿಗೆ ಕಿರಿಯರು ನೀಡುವ ಗೌರವ ಯಾವ ರೀತಿ ಇರಬೇಕೆನ್ನುವ ಸಂದೇಶ ಸಾರಿ ಸಾರಿ ಹೇಳುತ್ತದೆ.
ಒಟ್ಟಿನಲ್ಲಿ ಆಧುನಿಕ ಯುಗದಲ್ಲಿ ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲಿ ಮಾತ್ರ ಇಂತಹ ಆಚರಣೆಗಳು ಸದ್ಯ ರೂಢಿಯಲ್ಲಿದ್ದು, ಇಂದಿನ ಯುವಜನತೆ ಇಂತಹ ಸಂಪ್ರದಾಯಬದ್ಧ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಲಿ ಎನ್ನುವುದು ನಮ್ಮ ಆಶಯವಾಗಿದೆ.
ಇದನ್ನೂ ಓದಿ : ಕದಿರು ಕೊಯ್ದು ಹುತ್ತರಿ ಹಬ್ಬದಾಚರಣೆ.. ಕೊಡವರ ಮನೆ ಮನಗಳಲ್ಲಿ ಸಂಭ್ರಮ