ಕಾರವಾರ: ಅದು ಪ್ರಕೃತಿ ಸೌಂದರ್ಯದ ನಡುವೆ ಇರುವ ಸುಂದರ ಗ್ರಾಮ. ಆ ಗ್ರಾಮದಲ್ಲಿ ತಲೆ ತಲಾಂತರಗಳಿಂದ ಜನರು ಕೃಷಿ ಮಾಡುತ್ತಿದ್ದಾರೆ. ಆದರೆ ಆ ಗ್ರಾಮದಲ್ಲಿ ಗ್ರಾಮಸ್ಥರು ಮನೆ ಕಟ್ಟಿಕೊಳ್ಳುವಂತಿಲ್ಲ. ಹೊಲಗದ್ದೆಗಳನ್ನು ತಮ್ಮದು ಅಂತಾ ಹೇಳಿಕೊಳ್ಳುವಂತಿಲ್ಲ. ಜೊತೆಗೆ ಯಾವಾಗ ಅಧಿಕಾರಿಗಳು ಬಂದು ಗ್ರಾಮಸ್ಥರನ್ನು ಒಕ್ಕಲೆಬ್ಬಿಸುತ್ತಾರೋ ಎನ್ನುವ ಆತಂಕದಲ್ಲಿರುವಂತಾಗಿದೆ.
ಇದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೋರಳ್ಳಿ ಗ್ರಾಮದಲ್ಲಿ ಹಲವು ದಶಕಗಳಿಂದ ಅರಣ್ಯ ಪ್ರದೇಶದಲ್ಲೇ ಜೀವನ ಕಟ್ಟಿಕೊಂಡ ಸಾಕಷ್ಟು ಕುಟುಂಬಗಳ ಕಥೆ-ವ್ಯಥೆ. ಇಲ್ಲಿನ ಜನ ಗದ್ದೆ, ತೋಟ ನಿರ್ಮಿಸಿಕೊಂಡು ಕೃಷಿ ಮಾಡಿಕೊಂಡೇ ಬದುಕು ಸಾಗಿಸಿಕೊಂಡು ಬರುತ್ತಿದ್ದಾರೆ. ತಲೆ ತಲೆಮಾರುಗಳಿಂದಲೂ ಇದೇ ಪ್ರದೇಶದಲ್ಲೇ ವಾಸವಾಗಿದ್ದರೂ ಸಹ ಆ ಜಾಗ, ಕೃಷಿ ಮಾಡುತ್ತಿರುವ ಜಮೀನು ಅವರ ಹೆಸರಿಗಿಲ್ಲ. ಇದುವರೆಗೂ ಸರ್ಕಾರದ ದೃಷ್ಠಿಯಲ್ಲಿ 'ಅತಿಕ್ರಮಣದಾರ'ರಾಗಿಯೇ ಉಳಿದುಕೊಂಡಿದ್ದು, ಅವರಿಗೆ ಪಟ್ಟಾ ಕೊಡುವ ಕೆಲಸ ಮಾಡಿಲ್ಲ.
ಹುಟ್ಟಿ ಬೆಳೆದ ಜಾಗದಲ್ಲೇ ಆತಂಕದ ಬದುಕು: ಗುಡಿಸಲುಗಳಲ್ಲಿ ಬದುಕುತ್ತಿದ್ದವರು ಚಿಕ್ಕದಾಗಿ ಹೆಂಚಿನ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಅಂತಹ ಮನೆಗಳನ್ನು ದೊಡ್ಡದಾಗಿ ನಿರ್ಮಿಸಲು ಇಲ್ಲವೇ ರಿಪೇರಿ ಕಾರ್ಯ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಮನೆ ನಿರ್ಮಾಣಕ್ಕೆ ಮುಂದಾದಲ್ಲಿ ತಕ್ಷಣವೇ ಆಗಮಿಸುವ ಸಿಬ್ಬಂದಿ ಮನೆ ಕಟ್ಟದಂತೆ ಎಚ್ಚರಿಕೆ ನೀಡಿ ತೆರಳುತ್ತಾರೆ. ಹೀಗಾಗಿ ಹುಟ್ಟಿ ಬೆಳೆದ ಜಾಗದಲ್ಲೇ ನಮಗೆ ಮನೆ ಕಟ್ಟಿಕೊಳ್ಳುವುದು ಸಾಧ್ಯವಿಲ್ಲದಂತಾಗಿದ್ದು, ಬೇರೆ ಜಾಗವನ್ನೂ ಕೊಡದಿರುವುದರಿಂದ ಸಂಕಷ್ಟ ಎದುರಿಸುವಂತಾಗಿದೆ ಅನ್ನೋದು ಗ್ರಾಮಸ್ಥರ ಆಳಲು.
ತಳ ಸಮುದಾಯಕ್ಕೆ ಸಿಗದ ಪಟ್ಟಾ: ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೋರಳ್ಳಿ ಗ್ರಾಮದಲ್ಲಿ ಸುಮಾರು 350ಕ್ಕೂ ಅಧಿಕ ಮನೆಗಳಿವೆ. ಸಿದ್ದಿ, ಮುಕ್ರಿ ಸೇರಿದಂತೆ ಸಾಕಷ್ಟು ಸಮುದಾಯಗಳ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಕೆಲವರಿಗೆ ಮಾತ್ರ ಪಟ್ಟಾ ಕೊಟ್ಟಿದೆ. ಆದರೆ, ಎಸ್ಸಿ ಸಮುದಾಯದ ಸುಮಾರು 40 ಮನೆಗಳಿಗೆ ಇನ್ನೂ ಪಟ್ಟಾ ಕೊಟ್ಟಿಲ್ಲ. ಸಮರ್ಪಕ ದಾಖಲೆಗಳ ಕೊಡದ ನೆಪ ಹೇಳಿ ಪಟ್ಟಾ ನೀಡದೇ ನಿರ್ಲಕ್ಷ್ಯವಹಿಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮ ಎಂದು ಘೋಷಣೆಗೆ ಕ್ರಮ: ಪಡಿತರ, ಶೌಚಾಲಯದಂತಹ ಕೆಲವು ಸೌಲಭ್ಯಗಳನ್ನು ಹೊರತುಪಡಿಸಿ ಸರ್ಕಾರದ ಯಾವುದೇ ಸೌಲಭ್ಯಗಳೂ ಸಹ ಇಲ್ಲಿನ ಕುಟುಂಬಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 80ರಷ್ಟು ಅರಣ್ಯ ಪ್ರದೇಶ ಇರುವುದರಿಂದ ಅರಣ್ಯವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಸಮುದಾಯಗಳು ವಾಸಿಸುತ್ತಿರುವ ಪ್ರದೇಶವನ್ನು ಗ್ರಾಮ ಎಂದು ಘೋಷಿಸಿ ಅವರಿಗೆ ಮೂಲಭೂತ ಸೌಲಭ್ಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಭರಸವೆ ನೀಡಿದ್ದಾರೆ.
ಇದನ್ನೂ ಓದಿ: ಶಾಲಾ ಆರಂಭಕ್ಕೆ ಸಿದ್ದತೆ : ಖಾಯಂ ಶಿಕ್ಷಕರೇ ಇಲ್ಲದ ಉತ್ತರ ಕನ್ನಡದ 120 ಸರ್ಕಾರಿ ಶಾಲೆಗಳು