ಭಟ್ಕಳ: ಕೊರೊನಾ ಸಂಕಷ್ಟ ಎದುರಾಗಿದ್ದ ಕಾರಣ ಇಲ್ಲಿನ ವಾರದ ಸಂತೆ ರದ್ದುಪಡಿಸಲಾಗಿದ್ದು, 7 ತಿಂಗಳ ನಂತರ ನಾಳೆಯಿಂದ ಪುನಾರಂಭವಾಗಲಿದೆ.
ಸಂತೆ ಪುನಾರಂಭದ ವಿಷಯ ತಿಳಿಯುತ್ತಿದ್ದಂತೆ, ವ್ಯಾಪಾರಿಗಳು ತಮ್ಮ ಮಾರಾಟದ ವಸ್ತುಗಳನ್ನು ತಂದು ಸಿದ್ದ ಪಡಿಸಿಕೊಳ್ಳುತ್ತಿರುವುದು ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಕಂಡು ಬಂದಿದೆ.
ಈ ಬಗ್ಗೆ ಹಾನಗಲ್ ವ್ಯಾಪಾರಿ ಅಬ್ದುಲ್ ಖಾದರ್ ಮಾತನಾಡಿ, ನಾವು ಕಳೆದ 30 ವರ್ಷದಿಂದ ಸಂತೆ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ನಾಳೆಯಿಂದ ಸಂತೆ ಪ್ರಾರಂಭವಾಗುವ ವಿಷಯ ತಿಳಿದು ದೂರದ ಹಾನಗಲ್ ನಿಂದ ತರಕಾರಿ ತೆಗೆದುಕೊಂಡು ಮಾರಾಟ ಮಾಡಲು ಬಂದಿದ್ದೇನೆ ಎಂದರು.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ದೇವರಾಜ ಪ್ರತಿಕ್ರಿಯಿಸಿ, ಸಂತೆಗೆ ಬರುವ ವ್ಯಾಪಾರಸ್ಥರಿಗೆ ಕೊರೊನಾ ಮಾರ್ಗಸೂಚಿಯಂತೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಹಾಗೆಯೇ ನಾಳೆ ಸಂತೆಗೆ ಬರುವ ಗ್ರಾಹಕರು ಕೂಡ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ವಸ್ತುಗಳನ್ನು ಖರೀದಿಸಬೇಕು ಎಂದು ಹೇಳಿದ್ದಾರೆ.