ಉಡುಪಿ: ತೆಂಗನ್ನು ಕಲ್ಪವೃಕ್ಷ ಅಂತಾರೆ. ಈಗ ಇದೇ ತೆಂಗು ರೈತರ ಕಾಮಧೇನು ಆಗಿದೆ. ಎಂಟು ತೆಂಗಿನ ಮರ ಇದ್ರೆ ಸಾಕು ಲಕ್ಷ ಲಕ್ಷ ಸಂಪಾದಿಸಬಹುದು.
ಹೌದು, ಕರಾವಳಿಯಲ್ಲಿ ತೆಂಗಿನ ಹೊಂಬಾಳೆಯಿಂದ ತಯಾರಾಗುವ ಕಲ್ಪರಸ ಸಂಸ್ಕರಣಾ ಘಟಕ ಆರಂಭ ಆಗಿದ್ದು, ಇದು ಮುಂದಿನ ದಿನಗಳಲ್ಲಿ ರೈತರಿಗೆ ವರದಾನವಾಗಲಿದೆ. ವೈಟ್ ಕಾಲರ್ ಜಾಬ್ ಮಾಡುವ ಪೇಟೆ ಜನ ಹಳ್ಳಿ ಕಡೆ ನೋಡುವ ಕಾಲ ಬಂದಿದೆ. ಗ್ರೀನ್ ಕಾಲರ್ ಜಾಬ್ ಮಾಡಿ ತಾವೂ ಚೆನ್ನಾಗಿ ದುಡಿಯಬಹುದು ಅಂತ ಹಳ್ಳಿ ಹೈಕ್ಳು ರೆಡಿಯಾಗುತ್ತಿದ್ದಾರೆ. ತೆಂಗು ಬೆಳೆಗಾರರ ಹಿತರಕ್ಷಣೆ ಹಾಗೂ ತೆಂಗು ಉತ್ಪನ್ನಗಳ ಮೌಲ್ಯವರ್ಧನೆಗೆ ಉಡುಪಿಯಲ್ಲಿ ತೆಂಗಿನ ಕಲ್ಪರಸ ಮಾರುಕಟ್ಟೆಗೆ ಬಿಡುಗಡೆಗೆ ಸಿದ್ಧವಾಗಿದೆ.
ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಕಲ್ಪರಸ ತೆಗೆಯುವ ಸಂಸ್ಕರಣಾ ಘಟಕ ಆರಂಭಿಸಲಾಗಿದ್ದು, 14 ಯುವಕರಿಗೆ 45 ದಿನದ ತರಬೇತಿ ನಡೆಯುತ್ತಿದೆ. ತೆಂಗಿನ ಮರ ಹತ್ತುವ, ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುವ, ದಿನಕ್ಕೆರಡು ಬಾರಿ ಕಲ್ಪರಸ ತೆಗೆದು ಕೆಡದಂತೆ ಕಾಪಾಡುವ ತರಬೇತಿ ಕೊಡಲಾಗುತ್ತಿದೆ. ಸದ್ಯ ಉಡುಪಿ ಜಿಲ್ಲೆಯಲ್ಲಿ 1,028 ರೈತರು ಸಂಸ್ಥೆಗೆ ಷೇರುದಾರರಾಗಿದ್ದು, ಮುಂದಿನ 5 ವರ್ಷದಲ್ಲಿ 5 ಸಾವಿರ ಕುಟುಂಬ ಸೇರ್ಪಡೆಯಾಗಲಿದೆ.
ಒಂದು ರೈತ ಕುಟುಂಬಕ್ಕೆ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಸಂಗ್ರಹಿಸುವ ಅವಕಾಶವಿದೆ. ಒಂದು ಮರದಿಂದ ಪ್ರತಿದಿನ 2 ಲೀಟರ್ ಸಿಹಿರಸ ಇಳಿಯಲಿದೆ. ವರ್ಷಕ್ಕೆ 8 ಮರದಿಂದ 5,000 ಲೀಟರ್ ರಸ ಇಳಿದರೆ ವಾರ್ಷಿಕ ಸುಮಾರು ಒಂದು ಲಕ್ಷ ರೂ. ಆದಾಯ ಸಿಗುತ್ತದೆ. ಕಲ್ಪರಸ ತೆಗೆಯುವ ತಜ್ಞ ಯುವಕರು ಲೀಟರ್ ಗೆ 25 ರೂ., ಪಿಎಫ್, ಇಎಸ್ಐ ಸೌಲಭ್ಯ ಪಡೆಯಲಿದ್ದಾರೆ.
ಹೊಂಬಾಳೆಯಿಂದ ಪ್ರತಿದಿನ 2ರಿಂದ 3 ಬಾರಿ ಕಲ್ಪರಸ ಇಳಿಸಬಹುದು. ಪ್ರತಿ ಗ್ರಾಮಗಳಲ್ಲಿ ಕನಿಷ್ಟ 20ರಿಂದ 30 ಮಂದಿ ರೈತರನ್ನೊಳಗೊಂಡ ಸಹಕಾರ ಸಂಘ ರಚನೆಯಾದರೆ ರೈತರ ವರಮಾನ ಡಬ್ಬಲ್ ಆಗಲಿದೆ. ಅಬಕಾರಿ ಇಲಾಖೆ ತನ್ನ ಕಪಿಮುಷ್ಠಿ ಬಿಟ್ಟರೆ ರೈತರ ಬಾಳು ಬಂಗಾರವಾಗಲಿದೆ.