ಉಡುಪಿ: ನಾನು ಆಂಧ್ರ ಸಂಸದನ ಮಗ, ನನಗೆ ಮಾಜಿ ಸಿಎಂ ಸಿದ್ದರಾಮಯ್ಯ, ಸ್ಟೇಟ್ ಪ್ರಿನ್ಸಿಪಲ್ ಸೆಕ್ರೇಟರಿ ಗೊತ್ತು ಎಂದು ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಉಡುಪಿ ಟ್ರಾಫಿಕ್ ಪೊಲೀಸರ ಜೊತೆ ಕಿರಿಕ್ ಮಾಡಿದ ಘಟನೆ, ನಗರದ ಕಲ್ಸಂಕ ಜಂಕ್ಷನ್ನಲ್ಲಿ ನಡೆದಿದೆ.
ಕುಡಿದು ಮನಬಂದತೆ ಕಾರ್ ಚಲಾಯಿಸಿಕೊಂಡು ಬಂದ ಮಣಿಪಾಲ ವಿವಿಯ ಎಂಬಿಬಿಎಸ್ ವಿದ್ಯಾರ್ಥಿ ಅನುರಾಗ ರೆಡ್ಡಿ ಎಂಬ ಯುವಕನನ್ನು ಸಂಚಾರಿ ಪೊಲೀಸರು ಕಲ್ಸಂಕ ಜಂಕ್ಷನ್ನಲ್ಲಿ ತಡೆದಿದ್ದರು. ಈ ವೇಳೆ, ಆತನಿಗೆ ಮದ್ಯ ಸೇವನೆ ಮಾಡಿರುವ ಬಗ್ಗೆ ಪರೀಕ್ಷೆ ಮಾಡಿದಾಗ ಆಲ್ಕೋಹಾಲ್ ಮೀಟರ್ನಲ್ಲಿ ಕುಡಿತದ ಪ್ರಮಾಣ 193 ತೋರಿಸಿತ್ತು.
ಈ ಸಂಬಂಧ ಕಾನೂನಿನಂತೆ ದಂಡ ಹಾಕಲು ಮುಂದಾದ ವೇಳೆ, ತಾನು ಯಾವುದೇ ಕಾರಣಕ್ಕೂ 3000 ರೂ.ಗಳಿಗಿಂತ ಹೆಚ್ಚಿನ ದಂಡ ಕಟ್ಟುವುದಿಲ್ಲ. ನನ್ನ ಅಪ್ಪ ಆಂಧ್ರದ ಎಂಪಿ, ಆಂಧ್ರ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ನನ್ನ ಅಪ್ಪನ ಆಪ್ತ ಮಿತ್ರರು. ನಾನು ಅವರಿಗೆ ಕರೆ ಮಾಡುತ್ತೇನೆ. ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ರೈಟ್ ಹ್ಯಾಂಡ್. ನೀವು ಅವರಲ್ಲಿಯೇ ಮಾತನಾಡಿ ಎಂದು ದರ್ಪ ಮೆರೆದಿದ್ದಾನೆ.
ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು, ಆರೋಪಿ ಅನುರಾಗ್ ರೆಡ್ಡಿಯ ಕಾರನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಆತನ ಮೇಲೆ ಮದ್ಯಪಾನ ಮಾಡಿ ವಾಹನ ಚಾಲನೆ, ಅತೀವೇಗದ ವಾಹನ ಚಾಲನೆ ಕೇಸ್ ಹಾಕಿದ್ದಾರೆ. ಈ ಸಂಬಂಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.