ಉಡುಪಿ : ಪ್ರಾಕೃತಿಕ ವಿಕೋಪದಿಂದಾಗಿ ನಿರಾಶ್ರಿತರಾದವರಿಗೆ ತಾತ್ಕಾಲಿಕ ಪುನರ್ ವಸತಿ ಕಲ್ಪಿಸುವ ಉದ್ದೇಶಕ್ಕಾಗಿ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿ 58.02 ಕೋಟಿ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಅವರು, ಕಾಪು ಪಡು ಸರಕಾರಿ ಉನ್ನತ ಪ್ರಾಥಮಿಕ ಶಾಲೆಯ ಬಳಿ ನಿರ್ಮಾಣಗೊಂಡ ವಿವಿಧೋದ್ದೇಶ ಚಂಡಮಾರುತ ಆಶ್ರಯ ಕಟ್ಟಡ ಮತ್ತು ಹೆಜಮಾಡಿ ಕೋಡಿ ಮೀನುಗಾರಿಕಾ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ 5.05 ಕೋಟಿ. ರೂ. ವೆಚ್ಚದಲ್ಲಿ 2 ಚಂಡ ಮಾರುತ ಆಶ್ರಯ ಕಟ್ಟಡ ನಿರ್ಮಾಣ, 22.97 ಕೋಟಿ. ರೂ. ವೆಚ್ಚದಲ್ಲಿ 7 ಪ್ಯಾಕೇಜ್ನಡಿ 15 ಕಡಲ ತೀರ ಕೊಂಡಿ ರಸ್ತೆಗಳ ಅಭಿವೃದ್ಧಿ ಕಾರ್ಯ, ಮತ್ತು ಹೆಚ್ಚುವರಿಯಾಗಿ ಮಣೂರು ಗೋದನಗುಂಡಿ ಹೊಳೆಗೆ ಸೇತುವೆ ಮತ್ತು ಕೂಡುರಸ್ತೆ ನಿರ್ಮಾಣ 13.50 ಕೋ. ರೂ. ಮತ್ತು ಕೋಡಿ ಕನ್ಯಾಣ ಕೆಳಗೇರಿ - ಸಾಲಿಗ್ರಾಮ ಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣಕ್ಕೆ 16 ಕೋ. ರೂ. ಅನುದಾನ ಮೀಸಲಿಡಲಾಗಿದೆ ಎಂದರು.
ಸಿಆರ್ಝಡ್ ಕಾಯ್ದೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರಕಾರ ಕರಡು ನೀತಿಯನ್ನು ತಿದ್ದುಪಡಿ ಮಾಡಿದೆ. ಅದರಂತೆ ಈಗಿನ 200 ಮೀಟರ್ ವ್ಯಾಪ್ತಿಯನ್ನು 50 ಮೀಟರ್ ವ್ಯಾಪ್ತಿಯೊಳಗೆ ಕುಗ್ಗಿಸಿದೆ. ಪುರಸಭೆ ವ್ಯಾಪ್ತಿಯ ಜನರನ್ನು ಕಾಡುತ್ತಿರುವ ಸಿಂಗಲ್ ಲೇಔಟ್ನ ತೊಂದರೆಯನ್ನು ಪರಿಶೀಲಿಸಿ, ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.