ಉಡುಪಿ: ಹೈಕಮಾಂಡ್ ಬಳಿ ಹೋಗಿ ಮಂತ್ರಿಮಂಡಲ ರಚನೆ ಮಾಡುತ್ತೇವೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ನಿಧನ ಮತ್ತು ರಾಜ್ಯದ ನೆರೆಯಿಂದ ಸಂಪುಟ ರಚನೆ ಮುಂದೂಡಲಾಗಿದೆ. ನೆರೆ ಪರಿಹಾರ ನಮ್ಮ ಮೊದಲ ಆದ್ಯತೆ. ನೆರೆ ಸಮಸ್ಯೆ ಮುಗಿದ ಕೂಡಲೇ ಮಂತ್ರಿಮಂಡಲ ರಚಿಸಲಾಗುವುದು. ರಾಜ್ಯದ ನೆರೆ ಹಾನಿಯ ಸಂಪೂರ್ಣ ಲೆಕ್ಕ ಸಿಕ್ಕಿಲ್ಲ. ಮಳೆ ಹಾನಿ ಜಾಸ್ತಿಯಾಗುವ ಸಾಧ್ಯತೆ ಇದೆ. ಸಂಪೂರ್ಣ ಲೆಕ್ಕಾಚಾರ ಸಿಕ್ಕ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಯಡಿಯೂರಪ್ಪ ಎಲ್ಲಿದ್ದೀಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಶೋಭಾ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಅಸಹನೆಗೊಳಗಾಗಿದ್ದಾರೆ. ಅಧಿಕಾರ ಇಲ್ಲದೆ ಬೇಸತ್ತು ನೊಂದಿದ್ದಾರೆ. ಕುಮಾರಸ್ವಾಮಿ ಬಹಳ ಸಿಟ್ಟಿನಲ್ಲಿದ್ದಾರೆ. ಯಡಿಯೂರಪ್ಪನವರು ನೆರೆಯ ಸಂದರ್ಭದಲ್ಲಿ ಬೆಳಗಾವಿಗೆ ಧಾವಿಸಿದ್ದಾರೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಕೆಲಸ ಮಾಡಿದ್ದಾರೆ. ಭ್ರಮನಿರಸನಗೊಂಡವರ ಪ್ರಶ್ನೆಗೆ ಉತ್ತರಿಸಲ್ಲ. ಯಡಿಯೂರಪ್ಪ ನಿರಂತರ ಜನರ ಜೊತಗಿದ್ದಾರೆ ಎಂದರು.
ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವಿಚಾರವಾಗಿ ಮಾತಾಡಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ನ ನಿಲುವೇನು ಅನ್ನೋದು ಸ್ಪಷ್ಟವಾಗಿದೆ. ಕಾಂಗ್ರೆಸ್ನ ದಿವಾಳಿತನ, ದೇಶದ್ರೋಹ ಪ್ರದರ್ಶನವಾಗುತ್ತಿದೆ. ಕಾಂಗ್ರೆಸ್ ನಡೆಯಿಂದ ಬೇಸರವಾಗುತ್ತಿದೆ. ಪಿಒಕೆ ಮೊದಲು ಭಾರತದ ಕೈಗೆ ಬರಲಿ, ಬಲೂಚೀಸ್ಥಾನ, ಅಖಂಡ ಭಾರತ ಆಮೇಲೆ ನೋಡೋಣ ಎಂದು ಹೇಳಿದರು.