ಉಡುಪಿ: ಡಿಕೆಶಿಗೆ ಜಾಮೀನು ಸಿಕ್ಕಿರುವುದು ಉಪ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಪಕ್ಷವು ಗಾಂಧಿ ಪಥದಲ್ಲಿದ್ದು, 150ನೇ ಜಯಂತಿ ಸಲುವಾಗಿ ಪಾದಯಾತ್ರೆ ಕೈಗೊಳ್ಳುತ್ತಿದೆ. ಆದರೆ ನೂರು ವರ್ಷಕ್ಕೂ ಮೀರಿದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಚೌಕಟ್ಟು, ವಿಚಾರಧಾರೆಯನ್ನು ಮೀರಿ ವರ್ತಿಸುತ್ತಿದೆ. ಜವಾಬ್ದಾರಿ ರಹಿತ ನಡೆವಳಿಕೆ ತೋರಿಸುತ್ತಿದೆ ಎಂದು ಕಾಂಗ್ರೆಸ್ ವಿಜಯೋತ್ಸವಕ್ಕೆ ಕೋಟಾ ಟೀಕಿಸಿದ್ದಾರೆ.
ನೆರೆ ಪರಿಹಾರದಿಂದ ರಾಜ್ಯ ಸರ್ಕಾರ ಸ್ವಲ್ಪವೂ ಹಿಂದೆ ಸರಿದಿಲ್ಲ. ಉಪ ಚುನಾವಣೆಯಿಂದ ನೆರೆ ಪರಿಹಾರ ಕಾರ್ಯಕ್ಕೆ ಯಾವುದೇ ಅಡ್ಡಿಯಾಗಲ್ಲ. 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಮೊದಲೇ ಬಂದಿತ್ತು. ಈಗ ಮತ್ತೆ ಮೂರು ದಿನಗಳಿಂದ ಮಳೆಯಾಗುತ್ತಿದೆ. ಅನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ. ಸಿಎಂ, ಉಸ್ತುವಾರಿ ಮಂತ್ರಿಗಳು, ಶಾಸಕರು ಕಾರ್ಯೋನ್ಮುಖರಾಗಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಭಯ ಬೇಡ ಎಂದು ಸಚಿವರು ಹೇಳಿದರು.